– ಸಿ.ಎಸ್.ಅರಸನಾಳ
ಮುಂಡರಗಿ: ಬರಗಾಲವಿದ್ದಾಗ ಹುಣಸೆಹಣ್ಣು ಜಾಸ್ತಿ ಅನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ, ಈ ವರ್ಷ ಮಳೆಗಾಲ ಜಾಸ್ತಿಯಾಗಿದ್ದರೂ ಹುಣಸೆ ಮರಗಳು ಕಾಯಿಯಿಂದ ತುಂಬಿ ತುಳಕುತ್ತಿವೆ.
ಹುಣಸೆ ಎಲ್ಲರಿಗೂ ಪರಿಚಿತ ಸಾಂಬಾರ ಪದಾರ್ಥ. ಈ ಮರ ಮೂಲತಃ ಆಫ್ರಿಕಾ ಖಂಡದ ಪೂರ್ವ ಭಾಗದ್ದು ಎಂದು ಹೇಳಲಾಗುತ್ತಿದ್ದು, ಬಹು ಉಪಯೋಗಿ ಮರ. ಈ ಮರದ ಹಣ್ಣು ಬಡಿಯಲು, ಹಣ್ಣು ಕುಟ್ಟಲು ಬಾಡಿಗೆ ಬಿಟ್ಟರೆ ಉಳಿದಿದ್ದೆಲ್ಲ ಲಾಭ. ಹುಣಸೆ ಮರ ಬೆಳದವರ ಪಾಲಿಗೆ ಇದು ಕಲ್ಪವೃಕ್ಷ ಈ ವರ್ಷ ಸಮೃದ್ಧ ಇಳುವರಿಯಿಂದ ಹಣ್ಣು ಸಾಕಷ್ಟು ಬರುತಿದೆ. ದಿನಕಳೆದಂತೆ ಹಣ್ಣು ಕಪ್ಪು ಆದಲ್ಲಿ ಬೆಲೆ ಕುಸಿತ ಕಾಣುತ್ತಿದೆ. ಹೀಗಾಗಿ ಆರಂಭದಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಒಂದು ಸೀಜನ್ ಹಣ್ಣು ಬಿಟ್ಟರೆ, ಮತ್ತೊಂದು ಹಂಗಾಮಿಗೆ ಇಳುವರಿ ಕುಸಿತ ಕಾಣುವುದು ಸರ್ವೇ ಸಾಮಾನ್ಯವಾಗಿದೆ. ಇದು ಹಣಸೆ ಬೆಳೆಯ ವಿಶೇಷ. ಬರದಲ್ಲಿ ಬಸವಳಿದ ರೈತರಿಗೆ , ಈ ವರ್ಷ ಮಳೆಯೂ ಆಗಿದೆ ಮತ್ತು ಹುಣಸೆ ಬೆಲೆವೂ ಬರ್ಪೂರ ಬಂದಿದೆ. ಕೃಷಿಕರು ಇದಕ್ಕಾಗಿ ಹೆಚ್ಚು ವೆಚ್ಚ ಮಾಡಬೇಕಿಲ್ಲ. ಆದರೆ, ಹೆಚ್ಚು ಖರ್ಚು ವೆಚ್ಚವಿಲ್ಲದೆ ಅಧಿಕ ಲಾಭ ತರುವ ಈ ಹುಣಸೆ ಮಾತ್ರ ರೈತರ ಪಾಲಿಗೆ ಕಲ್ಪವೃಕ್ಷ. ಪಾಳುಬಿದ್ದ ಜಮೀನಿನಲ್ಲೂ, ಬದುವಿನ ಬದಿಗೂ, ಬೇಲಿ ಸಾಲಿನ ಹುಣಸೆ ಮರಗಳು ಪ್ರತಿವರ್ಷ ಆದಾಯ ತಂದುಕೊಡುತ್ತವೆ. ನೀರು ಗೊಬ್ಬರ ಹಾಕದಿದ್ದರೂ ಬರುವ ಮಳೆಗೆ ಸಹಜವಾಗಿ ಬೆಳೆದು ಫಲ ಕೊಡುತ್ತವೆ.
ಹುಣಸೆ ಹಣ್ಣಿನ ಇಂದಿನ ಬೆಲೆ ಪ್ರತಿಕ್ವಿಂಟಲ್ಗೆ 4500 ರಿಂದ 6000 ರೂ. ಇದೆ. ಹುಣಸೆ ಬೀಜಿನ ದರ ಪ್ರತಿಕ್ವಿಂಟಲ್ಗೆ 1350 ರಿಂದ 1620 ಇದೆ. ಈ ಬೆಲೆ ದಿನಾಲೂ ಏರಿಳಿತ ಕಂಡುಬರುತ್ತಿದೆ.
ಈ ವರ್ಷ ಸಾಕಷ್ಟು ಹುಣಸೆ ಕಾಯಿಗಳು ಆಗಿವೆ. ಎಲ್ಲ ಗಿಡಗಳಲ್ಲಿ ಕಾಯಿಗಳು ತುಂಬಿ ತುಳಕುತ್ತಿವೆ. ಹುಣಸೆ ಮರ ಇರುವ ರೈತರು ಸಾಕಷ್ಟು ಖುಷಿಯಿಂದ ಇದ್ದಾರೆ. ಬೆಲೆ ಏರಿಳಿತ ಇರುವುದರಿಂದ ರೈತರು ಚಿಂತೆಯಲ್ಲಿದ್ದಾರೆ.
-ಶಿವಾನಂದ ಇಟಗಿ, ರೈತರು ಮುಂಡರಗಿ