ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕರ್ನಾಟಕಕ್ಕೆ ಇದು ಅವರ ಮೊದಲ ಆಧ್ಯಾತ್ಮಿಕ ಭೇಟಿಯಾಗಿದ್ದು, ದೇವಿಗೆ 1.6 ಕೆಜಿ ತೂಕದ ಭವ್ಯ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಪೂರ್ಣಕುಂಭ ಸ್ವಾಗತ ಮತ್ತು ವಿಶೇಷ ಪೂಜೆ:
ಇಂದು ಮಧ್ಯಾಹ್ನ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಸಿಎಂ ವಿಜಯ್, ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತಲುಪಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ ಮತ್ತು ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಪೂರ್ಣಕುಂಭ ಗೌರವದೊಂದಿಗೆ ಬರಮಾಡಿಕೊಂಡರು. ಸಾಂಪ್ರದಾಯಿಕ ಧ್ವಜಸ್ತಂಭಕ್ಕೆ ನಮಸ್ಕರಿಸಿದ ನಂತರ ಗರ್ಭಗುಡಿಗೆ ಪ್ರವೇಶಿಸಿದ ಅವರಿಗೆ, ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗ ನೇತೃತ್ವದಲ್ಲಿ ದೇವಿಯ ದರುಶನ ಹಾಗೂ ವಿಶೇಷ ಸಂಕಲ್ಪ ಪೂಜೆ ನೆರವೇರಿಸಿಕೊಡಲಾಯಿತು.
ಎಂಜಿಆರ್ ಹಾದಿಯಲ್ಲಿ ವಿಜಯ್ ನಡೆ:
ದೇವಸ್ಥಾನದಲ್ಲಿ ಸುಮಾರು 20 ನಿಮಿಷಗಳ ಕಾಲ ಕಳೆದ ಸಿಎಂ ವಿಜಯ್, ದೇವಿಗೆ ಅರ್ಪಿಸಿದ 2.5 ಅಡಿ ಉದ್ದದ ಬೆಳ್ಳಿ ಖಡ್ಗವನ್ನು ನಿತ್ಯ ಪೂಜೆಗೆ ಬಳಸುವಂತೆ ಅರ್ಚಕರಲ್ಲಿ ವಿನಂತಿಸಿಕೊಂಡರು. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಜಿ. ರಾಮಚಂದ್ರನ್ ಮುಖ್ಯಮಂತ್ರಿಯಾಗಿ ಜಯಗಳಿಸಿದ ಬಳಿಕ ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗವನ್ನು ನೀಡಿದ್ದರು. ಈಗ ಅದೇ ಹಾದಿಯಲ್ಲಿ ವಿಜಯ್ ಬೆಳ್ಳಿ ಖಡ್ಗವನ್ನು ಅರ್ಪಿಸಿರುವುದು ರಾಜಕೀಯ ವಿಶ್ಲೇಷಕರಲ್ಲಿ ತಮಿಳುನಾಡು ರಾಜಕೀಯದ ದೀರ್ಘಾವಧಿ ಯಶಸ್ಸಿನ ಸಂಕೇತವಾಗಿ ಮತ್ತು ವಿಶೇಷ ಭಕ್ತಿಪೂರ್ವಕ ಕೃತಜ್ಞತೆಯ ಸಂಕೇತವಾಗಿ ಚರ್ಚೆಯಾಗುತ್ತಿದೆ.



