ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಎಲೆಕ್ಷನ್ ಗೆ ಸಿದ್ಧತೆಗಳು ಜೋರಾಗಿರುವ ನಡುವೆಯೇ ನಟ-ರಾಜಕಾರಣಿ ದಳಪತಿ ವಿಜಯ್ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ ಪರವಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ಅವರು ಚೆನ್ನೈನ ಪೆರಂಬೂರು ಹಾಗೂ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಏಪ್ರಿಲ್ 23ರಂದು ನಡೆಯಲಿರುವ ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಿ ನಗರ, ಮೈಲಾಪುರ, ವಿಲ್ಲಿವಕ್ಕಂ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಈ ಚುನಾವಣೆಯನ್ನು ನೇರ ಹೋರಾಟವೆಂದು ವಿವರಿಸಿದ ವಿಜಯ್, ತಮ್ಮ ಪಕ್ಷ ಮತ್ತು ಸ್ಟಾಲಿನ್ ಸರ್ ನೇತೃತ್ವದ ಮೈತ್ರಿಕೂಟದ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು. ಜನರಿಗೆ ಉತ್ತಮ ಆಡಳಿತ ನೀಡಲು ಅವಕಾಶ ನೀಡುವಂತೆ ಅವರು ಮನವಿ ಮಾಡಿದರು.
ಇದನ್ನೂ ಓದಿ:
ಪಕ್ಷವು ಯುವಕರಿಗೆ ಉದ್ಯೋಗ ಬೆಂಬಲದ ಭರವಸೆ ನೀಡಿದ್ದು, 29 ವರ್ಷ ಮೇಲ್ಪಟ್ಟ ನಿರುದ್ಯೋಗಿಗಳಿಗೆ ತಿಂಗಳಿಗೆ ₹4,000 ಸಹಾಯಧನ ನೀಡುವುದಾಗಿ ಘೋಷಿಸಿದೆ. ಡಿಪ್ಲೊಮಾ ಹೊಂದಿದವರಿಗೆ ₹2,500 ನೆರವು ಹಾಗೂ ವಿದ್ಯಾರ್ಥಿಗಳಿಗೆ ₹20 ಲಕ್ಷದವರೆಗೆ ಬಡ್ಡಿರಹಿತ ಸಾಲ ಯೋಜನೆಗಳನ್ನು ಪರಿಚಯಿಸುವುದಾಗಿ ತಿಳಿಸಿದೆ.
ಮಹಿಳಾ ಸುರಕ್ಷತೆ, ಮಾದಕವಸ್ತು ನಿಯಂತ್ರಣ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುವುದಾಗಿ ವಿಜಯ್ ಭರವಸೆ ನೀಡಿದರು. ಜನರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲವೆಂದು ಹೇಳಿ, ಒಂದು ಅವಕಾಶ ನೀಡುವಂತೆ ಮತದಾರರಿಗೆ ಮನವಿ ಮಾಡಿದರು.



