ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಕರ್ನಾಟಕದ ಕ್ರಿಕೆಟ್ ಆಟಗಾರನೊಂದಿಗೆ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಅವರು, ಸೆಪ್ಟೆಂಬರ್ 18ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಎರಡು ಕುಟುಂಬದ ಸದಸ್ಯರು ಹಾಗೂ ಕೆಲ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆಂದು ವರದಿಯಾಗಿದೆ.
ಟೀಂ ಇಂಡಿಯಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರೊಂದಿಗೆ ಸಪ್ತಪದಿ ತುಳಿಯಲಿರುವ ಅರ್ಜುನ್ ಹೂಯ್ಸಳ ಕೂಡ ಕ್ರಿಕೆಟಿಗರಾಗಿದ್ದಾರೆ. ಈಗಾಗಲೇ ದೇಶಿ ಕ್ರಿಕೆಟ್ನಲ್ಲಿ ಕರ್ನಾಟಕದ ಪರ ಮಿಂಚು ಹರಿಸಿದ್ದಾರೆ.
2016ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿರುವ ಅರ್ಜುನ್ ಅನೇಕ ಪಂದ್ಯಗಳಲ್ಲಿ ಮಿಂಚು ಹರಿಸಿದ್ದಾರೆ. ಆದರೆ, ಐಪಿಎಲ್ ಹಾಗೂ ರಾಷ್ಟ್ರೀಯ ತಂಡಕ್ಕೆ ಮಾತ್ರ ಅವಕಾಶ ಪಡೆದುಕೊಂಡಿಲ್ಲ.
ಇನ್ನು, ವೇದಾ ಕೃಷ್ಣಮೂರ್ತಿ 18ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು, ಇಲ್ಲಿಯವರೆಗೆ ಭಾರತದ ಪರ 48 ODI ಮತ್ತು 76 T20 ಪಂದ್ಯಗಳನ್ನು ಆಡಿದ್ದಾರೆ. 2017ರ ಏಕದಿನ ವಿಶ್ವಕಪ್ ಹಾಗೂ 2020ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದರು. ಕೋವಿಡ್ ಸಂದರ್ಭದಲ್ಲಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಹಾಗೂ ಸಹೋದರಿ ಸೋಂಕಿಗೆ ಬಲಿಯಾಗಿದ್ದರು.
ವೇದಾ ಕೃಷ್ಣಮೂರ್ತಿ ಅವರಿಗೆ ಕರ್ನಾಟಕ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಪ್ರೇಮ ನಿವೇದನೆ ಮಾಡ್ತಿರುವ ಫೋಟೋ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಈ ವಿಷಯ ಖಚಿತಪಡಿಸಲಾಗಿದೆ. ಫೋಟೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಶುಭಾಯಶಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.