ಹೊಸದಿಗಂತ ವರದಿ, ಅಂಕೋಲಾ:
ಭಾರತೀಯ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರ ಥ್ರೋ ಡೌನ್ ಪರಿಣಿತ ರಾಘು ದೀವಗಿ ಅವರು ತಾಲೂಕಿನ ವೀರ ವಿಠ್ಠಲ ಮಠಕ್ಕೆ ಭೇಟಿ ನೀಡಿ ಪರ್ತಗಾಳಿ ಮಠಾದೀಶರ ಆಶೀರ್ವಾದ ಪಡೆದರು.
ಪರ್ತಗಾಳಿ ಜೀವೋತ್ತಮ ಮಠದ ಪೀಠಾದಿಪತಿ ಶ್ರೀಮದ್ ವಿದ್ಯಾಧೀಶತೀರ್ಥ ವಡೇರ ಸ್ವಾಮೀಜಿಯವರು ಶ್ರೀಮಠದ ಶಾಖಾ ಮಠಗಳಲ್ಲಿ ಒಂದಾಗಿರುವ ಅಂಕೋಲಾದ ವೀರ ವಿಠ್ಠಲ ಮಠಕ್ಕೆ ಆಗಮಿಸಿದ್ದು ಕಾರ್ತಿಕ ಏಕಾದಶಿಯಂದು ಮುದ್ರಾ ಧಾರಣ ಕಾರ್ಯಕ್ರಮ ಇದ್ದ ಕಾರಣ ಪರ್ತಗಾಳಿ ಮಠದ ಭಕ್ತರಾದ ರಾಘು ದೀವಗಿ ವೀರ ವಿಠ್ಠಲ ಮಠಕ್ಕೆ ಭೇಟಿ ನೀಡಿ ಸ್ವಾಮಿಗಳ ದರ್ಶನ ಮತ್ತು ಆಶೀರ್ವಾದ ಪಡೆದರು.
ವೀರ ವಿಠ್ಠಲ ಮಠಕ್ಕೆಭೇಟಿ ನೀಡಿದ ರಾಘು ದೀವಗಿಯವರನ್ನು ತಾಲೂಕಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು, ವೀರ ವಿಠ್ಠಲ ಮಠದ ಆಡಳಿತ ಮಂಡಳಿಯವರು, ಜಿ.ಎಸ್. ಬಿ ಯುವ ವಾಹಿನಿಯ ಸದಸ್ಯರು ಆತ್ಮೀಯವಾಗಿ ಸ್ವಾಗತ ಕೋರಿದರು.
ಸ್ಥಳೀಯರೊಂದಿಗೆ ಅತ್ಯಂತ ಸೌಜನ್ಯದಿಂದ ಸೆಲ್ಪಿ ಪೋಟೋ ತೆಗೆದುಕೊಂಡ ರಾಘು ದೀವಗಿ ಅವರು ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ತಮ್ಮ ಕೆಲಸ, ಜವಾಬ್ದಾರಿ ಯಾವ ರೀತಿಯಲ್ಲಿ ಥ್ರೋ ಡೌನ್ ತರಬೇತಿ ನೀಡಲಾಗುತ್ತದೆ ಎನ್ನುವ ಕುರಿತು ವಿವರಗಳನ್ನು ಆತ್ಮೀಯವಾಗಿ ಹಂಚಿಕೊಂಡರು.
ರಾಘು ದೀವಗಿ ಅವರು ಕುಮಟಾ ತಾಲೂಕಿನವರಾಗಿದ್ದು ಕಳೆದ ಹಲವಾರು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಥ್ರೋ ಡೌನ್ ಪರಿಣಿತರಾಗಿ ತಂಡದ ಆಟಗಾರರ ಅಭ್ಯಾಸಕ್ಕೆ ನೆರವಾಗುವ ಜೊತೆಯಲ್ಲಿ ತಂಡದ ಎಲ್ಲಾ ಆಟಗಾರರ ಅಚ್ಚುಮೆಚ್ಚಿನ ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ.