ಹೊಸದಿಗಂತ ವರದಿ, ಕುಶಾಲನಗರ:
ಮಹಿಳೆಯರ ವೇಷ ಧರಿಸಿ ದಣೆವಾಲಯದ ಆವರಣದಲ್ಲಿದ್ದ ಕಾಣಿಕೆ ಡಬ್ಬವನ್ನು ಒಡೆದು ನಗದು ಅಪಹರಿಸಿರುವ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಕೂಡುಮಂಗಳೂರು ನಿವಾಸಿ ಮಹಮ್ಮದ್ ಗೌಸ್ ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿರುವ ಕಾಣಿಕೆ ಡಬ್ಬವನ್ನು ಮಹಿಳೆಯರ ಬಟ್ಟೆ ಧರಿಸಿದ ವ್ಯಕ್ತಿ ಹಾರೆಯಿಂದ ಮೀಟಿ ಹಣ ಕಳವು ಮಾಡಿರುವುದು ದೇವಾಲಯದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಸುಳಿವಿನ ಮೇರೆಗೆ ಅರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ತಂಡ ಬಂಧಿಸಿದೆ.
ಆರೋಪಿ ಮಹಮ್ಮದ್ ಗೌಸ್’ನ ವಿರುದ್ಧ ಈ ಮೊದಲೇ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮತ್ತು ನಗರ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೇವಾಲಯ ಮತ್ತು ಮನೆಗಳಿಗೆ, ಸಾರ್ವಜನಿಕ ಅಸ್ತಿಗಳಿಗೆ ಸಿ ಸಿ ಟಿವಿಗಳನ್ನು ಅಳವಡಿಕೆ ಮಾಡಿಕೊಳ್ಳುವಂತೆ ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.