ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಡಿಲ ಬಡಿತಕ್ಕೆ 10 ಮಂದಿ ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು ಸಿಡಿಲಿನ ಆಭರ್ಟಕ್ಕೆ 10 ಜನ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಸೇರಿದಂತೆ ಒಡಿಶಾದ ಕರಾವಳಿ ಪ್ರದೇಶದಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಖುರ್ದಾ, ಬೋಲಂಗೀರ್, ಅಂಗುಲ್, ಬೌಧ್, ಜಗತ್ಸಿಂಗ್ಪುರ, ಧೆಂಕನಲ್ನಲ್ಲಿ ಸಿಡಿಲು ಬಡಿದಿದ್ದು, ಖುರ್ದಾದಲ್ಲಿ ಮೂವರು ಗಾಯಗೊಂಡಿರುವುದಾಗಿ ಒಡಿಶಾದ ವಿಶೇಷ ಸಹಾಯಕ ಆಯುಕ್ತರ ಕಚೇರಿ ತಿಳಿಸಿದೆ.
ಮುಂದಿನ ನಾಲ್ಕು ದಿನಗಳಲ್ಲಿ ಒಡಿಶಾ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಹೇಳಿದೆ. ಭುವನೇಶ್ವರ ಮತ್ತು ಕಟಕ್ ನಗರಗಳಲ್ಲಿ ಕೇವಲ 90 ನಿಮಿಷಗಳಲ್ಲಿ 126 ಮಿಮೀ ಮಳೆಯಾಗಿದ್ದು, ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ಸಲಹೆ ಕೊಟ್ಟಿದೆ.