ಹೊಸದಿಗಂತ ವರದಿ, ಮಡಿಕೇರಿ:
ಮಡಿಕೇರಿ ನಗರದಲ್ಲಿದ್ದ ಜಾರ್ಖಂಡ್ ಮೂಲದ ಮೂವರು ಕೋವಿಡ್ ಸೋಂಕಿತರು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ನಗರದ ಗಾಂಧಿ ಮೈದಾನ ಬಳಿಯ ನಿರ್ಮಾಣ ಹಂತದಲ್ಲಿದ್ದ ರೆಡ್ಡಿ ಕಾಂಪ್ಲೆಕ್ಸ್’ನಲ್ಲಿದ್ದ ಸುಶೀಲ್ (24), ಶಾಂಬು ಉರವನ್ (25), ಫಂಟು (19) ಪರಾರಿಯಾದ ಕಾರ್ಮಿಕರಾಗಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇತರ 7ಮಂದಿಯೂ ಪರಾರಿಯಾಗಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಕಟ್ಟಡದ 59 ಕಾರ್ಮಿಕರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಸೋಂಕಿತ ಕಾರ್ಮಿಕರಿಗೆ ಕಟ್ಟಡದ ನೆಲ ಮಹಡಿಯಲ್ಲೇ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಗುರುವಾರ ಬೆಳಗಿನ ಜಾವ ಮೂವರು ಸೋಂಕಿತರ ಸಹಿತ 10ಮಂದಿ ಪರಾರಿಯಾಗಿದ್ದು, ಅವರ ಮೊಬೈಲ್’ಗಳೆಲ್ಲಾ ಸ್ವಿಚ್ ಆಫ್ ಆಗಿವೆ.
ಅಪರಾತ್ರಿ ಕಟ್ಟಡದ ಗೇಟ್ ಹಾರಿ ಓಡಿಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಪರಾರಿಯಾದ ಕಾರ್ಮಿಕರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.