ಹೊಸದಿಗಂತ ವರದಿ ತುಮಕೂರು:
ತುಮಕೂರು- ಶಿರಾ ರಾಷ್ಟ್ರೀಯ ಹೆದ್ದಾರಿಯ ಬಾಳೇನಹಳ್ಳಿ ಗೇಟ್ ಆಗಸ್ಟ್25ರ ಬೆಳಗಿನಜಾವ ಭೀಕರವಾದ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ 9ಜನರು ಮೃತರಾಗಿದ್ದು ಹದಿನೈದು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಸುತ್ತಮುತ್ತಲಿನ ಗ್ರಾಮಗಳ 23 ಮಂದಿ ಕೂಲಿ ಕಾರ್ಮಿಕರು ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಕ್ರೂಸರ್ ವಾಹನದಲ್ಲಿ ಬೆಂಗಳೂರಿನತ್ತ ಬರುವಾಗ ಬಾಳೇನಹಳ್ಳಿ ಗೇಟ್ ಬಳಿ ಲಾರಿಯನ್ನು ಹಿಂದಿಕ್ಕಲು ಹೋಗಿ ಈ ಅಪಘಾತ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಕ್ರೂಸರ್ ಚಾಲಕನೂ ಸೇರಿದಂತೆ ಒಂಭತ್ತು ಮಂದಿಸ್ಥಳದಲ್ಲಿಯೇ ಮೃತರಾಗಿದ್ದು ತೀವ್ರವಾಗಿ ಗಾಯಗೊಂಡ ಹದಿನೈದು ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಪೈಕಿ ಇಬ್ಬರನ್ನು ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಿರುವುದಾಗಿ, ಮೃತ ದೇಹಗಳನ್ನು ಶಿರಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ವ ಗಾಯಗಳಿಂದ ಬಚಾವಾದವರಿಂದ ಮೃತ ಸಂಬಂಧಿಕರಿಗೆ ವಿಷಯ ಮುಟ್ಟಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಮೃತರನ್ನು ಕೃಷ್ಣಪ್ಪ, ಸುಜಾತ, ವಿನೋದ ಹಾಗೂ ಲಕ್ಷ್ಮೀ(ಮಗು)ಎಂದು ಗುರುತಿಸಲಾಗಿದ್ದು ಉಳಿದ ಮೂವರು ಪುರುಷರು ಇಬ್ಬರು ಮಹಿಳೆಯರ ಗುರುತು ಸಿಗಬೇಕಿದೆ.