ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ದಾಳಿಯ ಸಂದರ್ಭದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಐಪಿಎಸ್ ಹೇಮಂತ್ ಕರ್ಕರೆ ಅವರನ್ನು ಪಾಕಿಸ್ತಾನಿ ಭಯೋತ್ಪಾದಕ ಕಸಬ್ ಕೊಂದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ನ ವಿಜಯ್ ವಾಡೆತ್ತಿವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಅವರನ್ನು ಕೊಂದ ಬುಲೆಟ್ ಕಸಬ್ ಅಥವಾ ಭಯೋತ್ಪಾದಕರಿಂದ ಹಾರಿಸಲಾಗಿಲ್ಲ, ಪೊಲೀಸ್ ಅಧಿಕಾರಿ ಬಂದೂಕಿನಿಂದ ಹಾರಿದ ಗುಂಡಿಗೆ ಬಲಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಉಲ್ಲೇಖಿಸಿ ವಿಜಯ್ ವಾಡೆಟ್ಟಿವಾರ್ ಮುಂಬೈನ ಬಿಜೆಪಿ ಅಭ್ಯರ್ಥಿ ಉಜ್ವಲ್ ನಿಕಮ್ ವಿರುದ್ಧ ವಾಗ್ದಾಳಿ ನಡೆಸಿದರು.
‘ಬಿರಿಯಾನಿ ವಿಷಯ ಪ್ರಸ್ತಾಪಿಸಿ ನಿಕಂ ಕಾಂಗ್ರೆಸ್ಗೆ ಮಾನಹಾನಿ ಮಾಡಿದ್ದಾರೆ. ಕಸಬ್ ಗೆ ಯಾರಾದರೂ ಬಿರಿಯಾನಿ ಕೊಡುತ್ತಾರಾ? ನಂತರ ಉಜ್ವಲ್ ನಿಕಮ್ ಅವರು ಎಂತಹ ವಕೀಲರು, ಅವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಸಹ ಬಾರದ ದೇಶದ್ರೋಹಿ, ಮುಂಬೈ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯನ್ನು ಕೊಂದ ಬುಲೆಟ್ ಕಸಬ್ನ ಬಂದೂಕಿನದ್ದಲ್ಲ, ಹೇಮಂತ್ ಕರ್ಕೆರೆಗೆ ಪಕ್ಕದಲ್ಲಿದ್ದ ಪೊಲೀಸ್ ಆಪ್ತರೇ ಗಂಡಿಕ್ಕಿದ್ದಾರೆ. ಆರ್ಎಸ್ಎಸ್ ಸಂಪರ್ಕಿತ ಈ ಪೊಲೀಸ್ ಕೈಯಿಂದ ಕರ್ಕೆರೆ ಮೃತಪಟ್ಟಿದ್ದಾರೆ ಎಂದು ನಾಯಕ ವಿಜಯ್ ಆರೋಪಿಸಿದ್ದಾರೆ.
ವಿಚಾರಣೆಯಲ್ಲಿ ಈ ಸಾಕ್ಷ್ಯಗಳ ಕುರಿತು ವಕೀಲ ಉಜ್ವಲ್ ನಿಕಮ್ ಸೊಲ್ಲೆತ್ತಿಲ್ಲ. ಇದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದಾರೆ. ಇದೀಗ ಇದೇ ಉಜ್ವಲ್ ನಿಕಮ್ಗೆ ಬಿಜೆಪಿ ಮುಂಬೈ ನಾರ್ತ್ ಸೆಂಟ್ರಲ್ನಿಂದ ಟಿಕೆಟ್ ನೀಡಿದೆ ಎಂದು ವಿಜಯ್ ವಡೆವಟ್ಟಿವರ್ ಆರೋಪಿಸಿದ್ದಾರೆ. ಮುಂಬೈ ದಾಳಿ ಕುರಿತು ಸಾಕ್ಷಿ ಆಧಾರಗಳನ್ನು ಕಲೆ ಹಾಕಿ ಕೋರ್ಟ್ನಲ್ಲಿ ವಾದ ಮಾಡಿ ಪಾಕಿಸ್ತಾನದ ಕೈವಾಡ ಬಟಾ ಬಯಲು ಮಾಡಿದ ಉಜ್ವಲ್ ನಿಕಮ್, ಉಗ್ರ ಅಜ್ಮಲ್ ಕಸಬ್ಗೆ ಗಲ್ಲು ಶಿಕ್ಷೆ ನೀಡುವಲ್ಲೂ ಯಶಸ್ವಿಯಾಗಿದ್ದರು. ಇದೀಗ ಮಹಾರಾಷ್ಟ್ರಯ ಕಾಂಗ್ರೆಸ್ ನಾಯಕನ ಪ್ರಕಾರ, ಉಜ್ವಲ್ ನಿಕಮ್ ವಕೀಲ ಅಲ್ಲ ದೇಶದ್ರೋಹಿ, ಕಸಬ್ ಅಮಾಯಕ ಎಂದಿದ್ದಾರೆ.
ಹೇಳಿಕೆ ವೈರಲ್ ಆಗುತ್ತಿದ್ದಂತೆ ವಡೆತ್ತಿವಾರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ‘ಅದು ನನ್ನ ಮಾತುಗಳಲ್ಲ, ಎಸ್.ಎಂ.ಮುಶ್ರೀಫ್ ಅವರ ಪುಸ್ತಕದಲ್ಲಿ ಬರೆದಿದ್ದನ್ನೇ ಹೇಳಿದ್ದೇನೆ. ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ಇತ್ತು ಎಂದು ಹೇಳಿದ್ದಾರೆ.
ವಿಜಯ್ ವಡೆತ್ತಿವಾರ್ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.ರಾಜಕೀಯ ಏನೇ ಇರಬಹುದು, ಲೋಕಸಭಾ ಚುನಾವಣೆಗೆ ಮತ ಕೇಳಲು, ಬಿಜೆಪಿ ಮೇಲೆ ವಾಗ್ದಾಳಿ ನಡೆಸಲು ಸಾಕಷ್ಟು ವಿಚಾರಗಳು ಇರಬಹುದು. ಆದರೆ ದೇಶದ ಮೇಲೆ ನಡೆದ ಭಯೋತ್ಪಾದನಾ ದಾಳಿ, ಉಗ್ರರಿಗೆ ಅಮಾಯಕ ಹಣೆ ಪಟ್ಟಿ ಕಟ್ಟುವುದು ದೇಶದ್ರೋಹದ ಕೆಲಸ ಎಂದು ಬಿಜೆಪಿ ಹೇಳಿದೆ. ಉಗ್ರರಿಗೆ ಅಮಾಯಕ ಪಟ್ಟ ಕಟ್ಟುವುದು ಕಾಂಗ್ರೆಸ್ ಮಾಡಿಕೊಂಡು ಬಂದಿರುವ ಪರಿಪಾಠ. ಕಾಂಗ್ರೆಸ್ ಪಾಕಿಸ್ತಾನದಲ್ಲಿ ಮತ ಕೇಳುತ್ತಿದೆಯಾ ಎಂದು ಬಿಜೆಪಿ ಪ್ರಶ್ನಿಸಿದೆ.