ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೇಶಾವರದ ಸರ್ಬಂದ್ ಪೊಲೀಸ್ ಠಾಣೆ ಮೇಲೆ ಉಗ್ರರು ದಾಳಿ ನಡೆಸಿದ್ದು, ಡಿಎಸ್ಪಿ ಸೇರಿದಂತೆ ಮೂವರು ಪೊಲೀಸರನ್ನು ಹತ್ಯೆಗೈದಿರುವ ಘಟನೆ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಡೆದಿದೆ. ಭಯೋತ್ಪಾದಕರ ದಾಳಿಯ ನಂತರ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಉಗ್ರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಭಯೋತ್ಪಾದಕರ ಬಳಿ ಮಾರಕಾಸ್ತ್ರಗಳು ಮತ್ತು ರಾತ್ರಿ ದೃಷ್ಟಿ ಕನ್ನಡಕಗಳು ಕೂಡ ಪತ್ತೆಯಾಗಿವೆ. ಭಯೋತ್ಪಾದಕರ ದಾಳಿಯ ಸಂದರ್ಭದಲ್ಲಿ ಪೊಲೀಸರು ಪ್ರತಿಭಟಿಸಿದ್ದು, ಈ ವೇಳೆ ಉಗ್ರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸರ್ದಾರ್ ಹುಸೇನ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಯೋತ್ಪಾದಕರು ಸರ್ಬಂದ್ ನಿಲ್ದಾಣದ ಮೇಲೆ ಲಾಂಗ್ ರೇಂಜ್ ರೈಫಲ್ಗಳು ಮತ್ತು ಹ್ಯಾಂಡ್ ಗ್ರೆನೇಡ್ಗಳಿಂದ ಎರಡೂ ಕಡೆಯಿಂದ ದಾಳಿ ನಡೆಸಿದರು.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ದಾಳಿ ವೇಳೆ ಪೊಲೀಸ್ ಠಾಣೆಯಲ್ಲಿ 12ರಿಂದ 14 ಮಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.