ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಆಲೂರಾ ಹಳ್ಳಿಯ ತೊಟವೊಂದರಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾಕರ ಮೇಲೆ ಜಮ್ಮು ಕಾಶ್ಮೀರ ಪೋಲೀಸರ ತಂಡವು ದಾಳಿ ನಡೆಸಿದ್ದು ಒಬ್ಬ ಹಿಜ್ಬುಲ್ ಉಗ್ರನನ್ನು ಎನ್ಕೌಂಟರ್ ಮಾಡಲಾಗಿದೆ.
ಹಳ್ಳಿಯ ಸೇಬಿನ ತೋಟವೊಂದರಲ್ಲಿ ಭಯೋತ್ಪಾದಕರು ಕುಳಿತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಸ್ಥಳವನ್ನು ಸಮೀಪಿಸುತ್ತಿದ್ದಂತೆ ಭಯೋತ್ಪಾದಕರು ಗುಂಡಿನ ದಾಳಿ ಪ್ರಾರಂಭಿಸಿದ್ದಾರೆ. ತಕ್ಷಣವೇ ತೋಟದಲ್ಲಿದ್ದ ಕಾರ್ಮಿಕರು ಮತ್ತು ನಾಗರಿಕರನ್ನು ಸ್ಥಳದಿಂದ ರವಾನಿಸಿ ತೋಟವನ್ನು ಸಂಪೂರ್ಣವಾಗಿ ಸುತ್ತುವರೆದು ಭದ್ರತಾ ಪಡೆಗಳು ಪ್ರತ್ಯುತ್ತರ ನೀಡಿದ್ದಾರೆ. ಕೆಲಕಾಲ ಗುಂಡಿನ ಚಕಮಕಿ ಮುಂದುವರೆದರೂ ಕೊನೆಗೂ ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲು ಭದ್ರತಾ ಪಡೆಗಳು ಯಶಸ್ವಿಯಾಗಿವೆ.
ಘಟನಾ ಸ್ಥಳದಿಂದ ಒಂದು 7.62 ಎಂಎಂ ಎಸ್ಎಲ್ಆರ್, ಒಂದು ಎಕೆ ರೈಫಲ್, ಗ್ರೆನೇಡ್ಗಳು, ಸುಧಾರಿತ ಸ್ಫೋಟಕ ಸಾಧನ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಯೋತ್ಪಾದಕನನ್ನು ನದೀಮ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ. ಈತ ಮಾರ್ಚ್ 2020 ರಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಮತ್ತು ಹಿಜ್ಬುಲ್ ಮುಜಾಹಿದೀನ್ನ ಜಿಲ್ಲಾ ಕಮಾಂಡರ್ ಫಾರೂಕ್ ಅಹ್ಮದ್ ಭಟ್ (ನಲಿ)ನ ಸಹವರ್ತಿಯಾಗಿದ್ದ ಎನ್ನಲಾಗಿದ್ದು ಇತ್ತೀಚಿನ ನಾಗರಿಕರ ಹತ್ಯೆಗಳಲ್ಲಿ ಭಾಗಿಯಾಗಿದ್ದ ಎಂದು ಪೋಲೀಸ್ ಮೂಲಗಳು ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ.