ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ದಶಕಗಳ ಮುನಿಸು, ಭಿನ್ನಾಭಿಪ್ರಾಯ ಮರೆತು ಶಿವಸೇನಾ ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಮತ್ತೆ ಒಂದಾಗುವ ಸುಳಿವು ಸಿಕ್ಕಿದೆ.
ಪರಸ್ಪರ ಸೋದರ ಸಂಬಂಧಿಗಳಾದ ಈ ಇಬ್ಬರು ನಾಯಕರು ಜತೆಯಾಗಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟ ಮಹೇಶ್ ಮಂಜ್ರೇಕರ್ ಅವರೊಂದಿಗಿನ ಪಾಡ್ಕ್ಯಾಸ್ಟ್ನಲ್ಲಿ ಭಾಗವಹಿಸಿದ ರಾಜ್ ಠಾಕ್ರೆ , ಮರಾಠಿ ಗುರುತಿಗೆ ಧಕ್ಕೆಯನ್ನುಂಟು ಮಾಡುವ ಸಮಸ್ಯೆಗಳ ಎದುರು ಅವರ ವೈಯಕ್ತಿಕ ಭಿನ್ನಾಭಿಪ್ರಾಯಗಳು ಅಷ್ಟೊಂದು ಮಹತ್ವ ಪಡೆದಿಲ್ಲ ಎಂದರು. ಆ ಮೂಲಕ ರಾಜಕೀಯ ಬದಿಗಿಟ್ಟು ಮರಾಠಿಗರು ಒಗ್ಗಟ್ಟಾಗಬೇಕಿದೆ.
ನನಗೆ, ಮಹಾರಾಷ್ಟ್ರದ ಕಲ್ಯಾಣವು ಅತೀ ಮುಖ್ಯ ಮತ್ತು ಉಳಿದೆಲ್ಲವೂ ಅದರ ನಂತರ ಬರುತ್ತದೆ. ನಾನು ಸಣ್ಣ ಭಿನ್ನಾಭಿಪ್ರಾಯಗಳನ್ನು ನಿರ್ಲಕ್ಷಿಸಬಲ್ಲೆ ಮತ್ತು ಉದ್ಧವ್ ಅವರೊಂದಿಗೆ ಕೈ ಜೋಡಿಸಲು ಸಿದ್ಧನಿದ್ದೇನೆ. ಅವರು ಅದೇ ರೀತಿ ಮಾಡಲು ಸಿದ್ಧರಿದ್ದಾರೆಯೇ ಎಂಬುದು ಒಂದೇ ಪ್ರಶ್ನೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಉದ್ಧವ್ ಠಾಕ್ರೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಮರಾಠಿ ಭಾಷೆ ಮತ್ತು ಮಹಾರಾಷ್ಟ್ರದ ಹಿತದೃಷ್ಟಿಯಿಂದ ನಾನು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಡಲು ಸಿದ್ಧನಿದ್ದೇನೆ. ನಾನು ಒಟ್ಟಿಗೆ ಕೆಲಸ ಮಾಡಲು ಮುಕ್ತನಾಗಿದ್ದೇನೆ, ಆದರೆ ಅವರು (ರಾಜ್) ಇನ್ನು ಮುಂದೆ ಮಹಾರಾಷ್ಟ್ರ ವಿರೋಧಿ ವ್ಯಕ್ತಿಗಳು ಮತ್ತು ಪಕ್ಷಗಳನ್ನು ಬೆಂಬಲಿಸಬಾರದು ಮತ್ತು ಅವರು ಛತ್ರಪತಿ ಶಿವಾಜಿ ಮಹಾರಾಜರ ಮುಂದೆ ಪ್ರಮಾಣ ಮಾಡಬೇಕು ಎಂದು ಹೇಳಿದರು.