ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ ಇಂದು ಸಂಜೆ ನಡೆದಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯದ ಔರಂಗಾಬಾದ್ ನಗರಕ್ಕೆ ‘ಸಂಭಾಜಿನಗರ’ ಹಾಗು ಒಸ್ಮಾನಾಬಾದ್ಗೆ ‘ಧಾರಶಿವ್’ ಎಂದು ಮರುನಾಮಕರಣ ಮಾಡಲು ಸಂಪುಟ ಅನುಮೋದನೆ ನೀಡಿದೆ. ಇದೇ ವೇಳೆ, ನವಿಮುಂಬೈ ವಿಮಾನ ನಿಲ್ದಾಣದ ಹೆಸರನ್ನು ಡಿ.ಬಿ.ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾಯಿಸಲು ನಿರ್ಧರಿಸಲಾಗಿದೆ.
ಈ ಕುರಿತು ಮಾತನಾಡಿದ ಅವರು , ಉದ್ಧವ್ ಠಾಕ್ರೆ, ಔರಂಗಾಬಾದ್ಗೆ ಸಂಭಾಜಿ ನಗರ ಎಂದು ಮರುನಾಮಕರಣ ಮಾಡುವುದಾಗಿ ನನ್ನ ತಂದೆ ಬಾಳಾ ಸಾಹೇಬ್ ಠಾಕ್ರೆಗೆ ನೀಡಿರುವ ಭರವಸೆಯನ್ನು ನಾನು ಮರೆತಿಲ್ಲ ಎಂದು ಹೇಳಿದ್ದರು. ಆ ಭರವಸೆಯಂತೆ ಇದೀಗ ನಿರ್ಧಾರ ಕೈಗೊಂಡಿದ್ದಾರೆ.
ಈ ಹಿಂದೆ ಮೊಘಲರ ಆಡಳಿತದಲ್ಲಿ ಔರಂಗಜೇಬ್, ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಔರಂಗಾಬಾದ್ ನಗರ ಸ್ಥಾಪನೆ ಮಾಡಿದ್ದರು. ಇದೀಗ ಈ ನಗರವನ್ನು ‘ಸಂಭಾಜಿನಗರ’ ಎಂದು ಮರುನಾಮಕರಣ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದ ವಿರುದ್ಧಶಿವಸೇನೆಯ ಶಾಸಕರು ಬಂಡಾಯವೆದ್ದಿರುವ ಕಾರಣ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಭೀತಿಯಲ್ಲಿದೆ. ನಾಳೆ ವಿಶ್ವಾಸಮತಯಾಚನೆ ನಡೆಯುವ ಸಾಧ್ಯತೆ ದಟ್ಟವಾಗಿದೆ.