ಹೊಸದಿಗಂತ ವರದಿ ಹುಬ್ಬಳ್ಳಿ:
ಸೌಜನ್ಯ ಕೊಲೆಯ ಪ್ರಕರಣ ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಆರೋಪಿಗಳು ಎಂತಹ ಪ್ರಭಾವಿಗಳಾಗಿದ್ದರು ಅವರ ವಿರುದ್ಧ ತನಿಖೆ ಆಗ್ರಹಿಸಲಿ.ಅದನ್ನು ಬಿಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ವರೂರಿನ ನವಗ್ರಹ ತೀರ್ಥ ಗುಣಧರ ನಂದಿ ಮಹರಾಜರು ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷದಿಂದ ನಡೆದಿದ್ದ ಸೌಜನ್ಯ ಎಂಬುವವರ ಹತ್ಯೆ ಪ್ರಕರಣ ಅತಿ ದೊಡ್ಡ ದುರ್ಘಟನೆಯಾಗಿದೆ. ಜಗತ್ತಿನಲ್ಲಿ ಅತ್ಯಂತ ಹೀನ ಕೃತ್ಯವಾಗಿದೆ. ತಪ್ಪು ಮಾಡಿದವರು ಯಾರೇ ಇದ್ದರು ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣ ತನಿಖೆ ಆಗ್ರಹಿಸುವ ಬದಲು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಧರ್ಮಸ್ಥಳದ ಹೆಸರು ಕೆಡಿಸುತ್ತಿದ್ದಾರೆ. ಅದು ಖಂಡನೀಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಮೆ ಉತ್ತಮ ಕಾನೂನು ನೀಡಿದ್ದಾರೆ. ನ್ಯಾಯಾಲಯದಲ್ಲಿ ಪ್ರತಿಯೊಬ್ಬರಿಗೆ ನ್ಯಾಯ ದೊರಕುತ್ತದೆ ಎಂದರು.
ಸರ್ಕಾರ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ತಕ್ಷಣ ಮಧ್ಯ ಪ್ರವೇಶಿಸಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಸೌಜನ್ಯ ಪ್ರಕರಣ ಉನ್ನತ ತನಿಖೆ ವಹಿಸಬೇಕು ಎಂದು ಹೇಳಿದರು.