ದಿಗಂತ ವರದಿ ವಿಜಯಪುರ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ರಾಜ್ಯ ಬಜೆಟ್ ಹೆಸರಿಗೆ ಮಾತ್ರ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿ ನಾಲ್ಕು ವರ್ಷ ಇದ್ದರೂ ಜನರ ಒಳಿತಕ್ಕಾಗಿ ಒಂದು ಯೋಜನೆಯೂ ಜಾರಿ ಮಾಡಲಿಲ್ಲ. ಈಗ ಅಧಿಕಾರಾವಧಿ ಕೇವಲ 20ದಿನ ಉಳಿದಾಗ ಜನಪ್ರಿಯ ಘೋಷಣೆ ಮಾಡಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಮಹಿಳೆಯರ ಅಕೌಂಟ್ ಗಳಿಗೆ ಪ್ರತಿ ತಿಂಗಳು 2ಸಾವಿರ ರೂ. ಹಾಕುವುದಾಗಿ ಹೇಳಿದ್ದೇವೆ. ಎಲ್ಲ ವರ್ಗದವರಿಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುವುದಾಗಿ ಭರವಸೆ ನೀಡಿದ್ದೇನೆ. ಈ ನಮ್ಮ ಭರವಸೆ ಅಧಿಕಾರಕ್ಕೆ ಬಂದರೆ ಖಂಡಿತ ಈಡೇರಿಸುತ್ತೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು, ಈ ಬಗ್ಗೆ ನನಗೆ ವಿಶೇಷ ಅಧಿಕಾರ ಇಲ್ಲ. ಎಲ್ಲ ನಾಯಕರು ಒಗ್ಗಟ್ಟಾಗಿ ನಿರ್ಧಾರ ಮಾಡುತ್ತಾರೆ. ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಈ ಬಗ್ಗೆ ನಿರ್ಧಾರ ಮಾಡ್ತಾರೆ ಎಂದರು.
ಸಾಮೂಹಿಕ ನಾಯಕತ್ವದಲ್ಲಿ ಅಭ್ಯರ್ಥಿ ಘೋಷಣೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಎಲ್ಲ ಆಯಾಮಗಳನ್ನು ಪರಿಗಣಿಸಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಆದಷ್ಟು ಬೇಗ ಅಭ್ಯರ್ಥಿಗಳನ್ನು ಚುನಾವಣೆ ಆಖಾಡಕ್ಕೆ ಇಳಿಸುತ್ತೇವೆ. ಅಭ್ಯರ್ಥಿಗಳನ್ನು ಬೇಗ ಕಣಕ್ಕಿಳಿಸುವ ಅಗತ್ಯವಿದೆ ಎಂದರು.
ಮಾಜಿ ಡಿಸಿಎಂ ಜಿ. ಪರಮೇಶ್ವರ ಸಿಎಂ ಆಗುವ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಪರಮೇಶ್ವರ ಒಳ್ಳೆಯ ರಾಜಕಾರಣಿ. ಅಧಿಕಾರಕ್ಕಾಗಿ ಲಡಾಯಿ ಇಲ್ಲ. ನಮ್ಮ ಲಡಾಯಿ ಇರೋದು ಬಿಜೆಪಿ ಸರ್ಕಾರದ ವಿರುದ್ಧ ಆಗಿದೆ ಎಂದರು.
ಭ್ರಷ್ಟಾಚಾರ ಸರ್ಕಾರ ವಿರುದ್ಧ ಲಡಾಯಿ ಆಗಿದೆ. ನಮ್ಮ ಲಡಾಯಿ ಅಧಿಕಾರಕ್ಕೆ ಅಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಲಡಾಯಿ ಇದೆ ಎಂದರು.
ಅಧಿಕಾರಕ್ಕಾಗಿ ಆಸೆ, ಇಚ್ಛೆ ಇಟ್ಟುಕೊಳ್ಳುವುದು ತಪ್ಪು ಅಲ್ಲ. ನಮ್ಮ ಎಲ್ಲರ ಒಂದೇ ಗುರಿಯಾಗಿದೆ ಅದು ಬ್ರ್ಯಾಂಡ್ ಕರ್ನಾಟಕ ಆಗಿದೆ ಎಂದರು.