ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸರ ನಿರ್ಲಕ್ಷ್ಯಕ್ಕೆ ಪುಟ್ಟ ಮಗುವೊಂದು ಪ್ರಾಣ ಕಳೆದುಕೊಂಡ ದಾರುಣ ಘಟನೆ ಹೈದರಾಬಾದ್ನ ಜನಗಾಮ ಜಿಲ್ಲೆಯಲ್ಲಿ ನಡೆದಿದೆ. ಮಚ್ಚಮಲ್ಲೇಶಂ ಸರಸ್ವತಿ ದಂಪತಿಯ ಮೂರು ತಿಂಗಳ ಗಂಡು ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಜನಗಾಮ ಜಿಲ್ಲಾಸ್ಪತ್ರೆ ವೈದ್ಯರು ಮಗುವನ್ನು ಹೈದರಾಬಾದ್ನ ನಿಲೋಫರ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.
ವೈದ್ಯರ ಸೂಚನೆ ಮೇರೆಗೆ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯಾದಾದ್ರಿಯ ಭುವನೇಶ್ವರಿ ಜಿಲ್ಲೆಗೆ ಕಾರು ಬರುತ್ತಿದ್ದಂತೆ ವಂಗಪಲ್ಲಿಯಲ್ಲಿ ಪೊಲೀಸರು ಕಾರನ್ನು ತಡೆದಿದ್ದಾರೆ. ಸೀಟ್ ಬೆಲ್ಟ್ ಹಾಕದ ಕಾರಣ ಹೇಳಿ ಕಾರು ತಡೆದಿದ್ದಾರೆ. ಜೊತೆಗೆ ಬಾಕಿ ಇರುವ ಬಿಲ್ ಪಾವತಿಸಿದರೆ ಮಾತ್ರ ಕಾರು ಬಿಡುವುದಾಗಿ ಹೇಳಿ 45ನಿಮಿಷಗಳ ಕಾಲ ಸತಾಯಿಸಿದ್ದಾರೆ. ಹಣ ಪಾವತಿ ಮಾಡದಿದ್ದಲ್ಲಿ ಕಾರು ಬಿಟ್ಟು ಹೋಗುವಂತೆ ತಾಕೀತು ಮಾಡಿದ್ದಾರೆ.
ತಮ್ಮ ಮಗು ತೀವ್ರ ಅನಾರೋಗ್ಯದಿಂದ ಬಳಲುತ್ತಿದೆ ಜೀವನ್ಮರಣ ಹೋರಾಟ ನಡೆಸುತ್ತಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು ಎಂದು ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ಕನಿಕರ ತೋರಿಲ್ಲ ಎಂದು ಬಾಲಕನ ತಾಯಿ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ತಡವಾಗಿದ್ದರಿಂದ ನನ್ನ ಮಗ ಮೃತಪಟ್ಟಿದ್ದಾನೆ ಎಂದು ಮಗುವಿನ ತಾಯಿ ಕಣ್ಣೀರು ಹಾಕಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಕಾರಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಗು ಇದೆ ಎಂದು ಅವರು ನಮಗೆ ತಿಳಿಸಿಲ್ಲ ಎಂದು ನಿರ್ಲಕ್ಷ್ಯದ ಉತ್ತರವನ್ನು ನೀಡಿದ್ದಾರೆ.