ಹೊಸ ದಿಗಂತ ಡಿಜಿಟಲ್ ಡೆಸ್ಕ್:
“ಅವತ್ತಿನ ಕಾಂಗ್ರೆಸ್ ನಾಯಕತ್ವದ ಒಂದು ವರ್ಗಕ್ಕೆ ಸುಭಾಷಚಂದ್ರ ಬೋಸರ ಬಗ್ಗೆ ಮತ್ಸರವಿತ್ತು. ಮೇಲಿನ ನಾಯಕರನ್ನು ಖುಷಿಗೊಳಿಸುವುದಕ್ಕೆ ಕೆಳಹಂತದವರೂ ಇದನ್ನೇ ಮಾಡಿದರು. ಹೀಗಾಗಿ ಕಾಂಗ್ರೆಸ್ ನೋತಾಜಿ ಸುಭಾಷಚಂದ್ರ ಬೋಸರನ್ನು ‘ಮರೆತುಹೋದ ಹೀರೋ’ ಆಗಿಸಿತು” ಹೀಗೆಂದು ಸುಭಾಷಚಂದ್ರ ಬೋಸರ ಮಗಳು ಅನಿತಾ ಬೋಸ್ ನ್ಯೂಸ್ 18 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜರ್ಮನಿಯ ರಾಯಭಾರಿಯೊಬ್ಬರು ಕೇಳಿದರಂತೆ- ನೇತಾಜಿಯವರ ಕುಟುಂಬಸ್ಥರನ್ನು ಸಂಪರ್ಕಿಸುವುದಕ್ಕೆ ಭಾರತದ ಪ್ರಧಾನಿಯ ಅನುಮತಿ ಪಡೆದುಕೊಳ್ಳಬೇಕು ಹೌದೇ ಎಂದು. ಇದು ನರಸಿಂಹರಾವ್ ಅವರನ್ನೇ ಆಶ್ಚರ್ಯಕ್ಕೆ ದೂಡಿತು. ಅಂಥದ್ದೇನೂ ಇಲ್ಲ, ಯಾರಾದರೂ ಅವರನ್ನು ನೇರವಾಗಿ ಸಂಪರ್ಕಿಸಬಹುದು ಎಂದರು. ಅಂದರೆ ಅಲ್ಲಿಯವರೆಗೆ ಕಾಂಗ್ರೆಸ್ ಅಂಥದೊಂದು ಸ್ಥಿತಿ ನಿರ್ಮಾಣ ಮಾಡಿತ್ತು ಎಂದು ಅನಿತಾ ಬೇಸ್ ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷಚಂದ್ರ ಬೋಸರ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವುದನ್ನು ಅನಿತಾ ಬೋಸ್ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಇದೇ ಸಂದರ್ಶನದಲ್ಲಿ ಅವರು ‘ನೇತಾಜಿ ಗುಮ್ನಾಮಿ ಬಾಬಾ ಆಗಿದ್ದರು’ ಎಂಬ ಮಾತುಗಳನ್ನು ಖಂಡಿಸುತ್ತ, ಹೀಗೆಲ್ಲ ನೇತಾಜಿ ಪರದೆ ಹಿಂದೆ ಬದುಕಿದ್ದರು ಎಂದು ಹೇಳುವುದೇ ಅವಮಾನ, ವಿಮಾನ ಅಪಘಾತದಲ್ಲಿ ಅವರು ತೀರಿಕೊಂಡಿದ್ದರು ಎಂದು ಪ್ರತಿಪಾದಿಸಿದ್ದಾರೆ.