ದೇಶ ವಿರೋಧಿ ಸಂಘಟನೆ ʻಗ್ಯಾರೆಂಟಿʼ ಮೇರೆಗೆ ಕಾಂಗ್ರೆಸ್‌ ಪ್ರಣಾಳಿಕೆ ಸಿದ್ಧವಾಗಿದೆ-ಅಸ್ಸಾಂ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವುದೋ ದೇಶವಿರೋಧಿ ಸಂಘಟನೆ (ಪಿಎಫ್‍ಐ) ನೀಡಿದ ಗ್ಯಾರೆಂಟಿ ಮೇರೆಗೆ ಕಾಂಗ್ರೆಸ್‌ ತನ್ನ ಚುನಾವಣೆ ಪ್ರಣಾಳಿಕೆ ಸಿದ್ದಪಡಿಸಿಕೊಂಡಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಕರ್ನಾಟಕ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಇದು, ದೇಶಾದ್ಯಂತ ಏಕರೂಪ ನೀತಿ ಜಾರಿಗೊಳ್ಳಲು ರಾಷ್ಟ್ರವ್ಯಾಪಿ ಒತ್ತಡಕ್ಕೆ ಹಾದಿ ಮಾಡಿಕೊಡಲಿದೆ.

ಆಧಾರ್‌ನಿಂದ ಪೌರತ್ವ ದೃಢೀಕರಣವಾಗುವುದಿಲ್ಲ. ಆಧಾರ್ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ದೇಶದಲ್ಲಿ ಎನ್‍ಆರ್‌ಸಿ ಜಾರಿಯಾಗಿಲ್ಲ. ಸುದೀರ್ಘ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಇಂದಿನವರೆಗೆ ಈ ಬಗ್ಗೆ ಚಕಾರವೆತ್ತಿಲ್ಲ. ಎನ್‍ಆರ್‌ಸಿ ಜಾರಿಗೆ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡ ಕ್ರಮವು, ರಾಷ್ಟ್ರವ್ಯಾಪಿ ಎನ್‍ಆರ್‌ಸಿ ಜಾರಿಗೊಳ್ಳಲು ರಾಷ್ಟ್ರವ್ಯಾಪಿ ಒತ್ತಡಕ್ಕೆ ಹಾದಿ ಮಾಡಿಕೊಡಲಿದೆ ಎಂದರು.

ಬಜರಂಗದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್, ಪಿಎಫ್‍ಐ ಅನ್ನು ಏಕೆ ನಿಷೇಧಿಸಿರಲಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಇಂಡಿಯನ್ ಮುಸ್ಲಿಂ ಲೀಗ್‍ನೊಂದಿಗೆ ಮೈತ್ರಿ ಹೊಂದಿದೆ. ಕಾಂಗ್ರೆಸ್, ಜಾತ್ಯತೀತ ಪಕ್ಷವಲ್ಲ. ಬಿಜೆಪಿಯನ್ನು 40 ಪರ್ಸೆಂಟ್ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ಬೋಫೋರ್ಸ್ ಎಷ್ಟು ದೊಡ್ಡ ಹಗರಣ ಎಂಬುದನ್ನು ಕಾಂಗ್ರೆಸ್ ಅವಲೋಕಿಸಬೇಕು.

ಗ್ಯಾರಂಟಿ ನೀಡಲು ರಾಹುಲ್ ಗಾಂಧಿ ಯಾರು ಎಂದು ಪ್ರಶ್ನಿಸಿದ ಬಿಸ್ವಾ ಅವರು, ರಾಹುಲ್ ಗಾಂಧಿ ಸಂಸದರೂ ಅಲ್ಲ. ಅವರ ಬಗ್ಗೆ ಅವರಿಗೇ ಗ್ಯಾರಂಟಿ ಇಲ್ಲ. ಗ್ಯಾರಂಟಿ ನಿಜವಾಗಿದ್ದರೆ, ಅಮೇಥಿ ಅಭಿವೃದ್ಧಿಯಾಗಬೇಕಿತ್ತು. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲಸಬೇಕಿತ್ತು. ರಾಮಮಂದಿರ-ಬಾಬರಿ ಮಸೀದಿ ವಿವಾದ ಇತ್ಯರ್ಥವಾಗಬೇಕಿತ್ತು. ಕರ್ನಾಟಕ ಜನರ ಪ್ರತಿಭೆ, ಪರಿಶ್ರಮದಿಂದ ರಾಜ್ಯ ಮುಂಚೂಣಿಯಲ್ಲಿದೆ. ರಾಹುಲ್ ಗಾಂಧಿ ಗ್ಯಾರಂಟಿಗಳಿಂದಲ್ಲ ಎಂದು ಆಕ್ಷೇಪಿಸಿದರು.

ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ತೆಗೆದುಹಾಕಿ ಹಿಂದುಳಿದ ವರ್ಗಗಳಿಗೆ ಹಂಚುವ ಕರ್ನಾಟಕ ಸರ್ಕಾರದ ಕ್ರಮವೂ ಐತಿಹಾಸಿಕ. ಸಂವಿಧಾನದಲ್ಲಿ ಧಾರ್ಮಿಕ ಆಧಾರದಡಿ ಮೀಸಲಾತಿಗೆ ಅವಕಾಶವಿಲ್ಲ. ಡಾ.ಅಂಬೇಡ್ಕರ್ ಅವರು ಇದಕ್ಕೆ ವಿರುದ್ಧವಾಗಿದ್ದರು.

ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಜಗಜ್ಯೋತಿ ಬಸವಣ್ಣ, ಕೆಂಪೇಗೌಡ, ಕಿತ್ತೂರು ರಾಣಿ ಚನ್ನಮ್ಮ ನಂತಹ ಮಹನೀಯರ ಬಗ್ಗೆ ತಿಳಿದಿದ್ದೇನೆ. ಆದರೆ, ಈ ಮಹನೀಯರು ತಮ್ಮ ರಾಜ್ಯ ಅಸ್ಸಾಂ ಸೇರಿದಂತೆ ಕರ್ನಾಟಕ ಹೊರಗೆ ಪರಿಚಯವೇ ಇಲ್ಲ. ನಮ್ಮ ಪಠ್ಯಪುಸ್ತಕಗಳಲ್ಲಿ ಬಾಬರ್, ಔರಂಗಜೇಬ್ ಟಿಪ್ಪು ಅಂತವರ ಚರಿತ್ರೆ ಇದೆ. ಆದರೆ, ಬಸವಣ್ಣ, ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮನವರ ಬಗ್ಗೆ ಇಲ್ಲ. ಪ್ರಧಾನಿ ನರೇಂದ್ರಮೋದಿಯವರು ಎಲ್ಲ ಭಾಗದ ಮಹನೀಯರನ್ನು ದೇಶಕ್ಕೆ ಪರಿಚಯಿಸಿ, ಅವರ ಸಾಧನೆ, ತ್ಯಾಗಗಳ ಬಗ್ಗೆ ತಿಳಿಸುವ ಕೆಲ ಮಾಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!