ಹೊಸದಿಗಂತ ವರದಿ,ಮೇಲುಕೋಟೆ :
ಪ್ರಖ್ಯಾತ ಪ್ರವಾಸಿತಾಣವಾದ ಮೇಲುಕೋಟೆ ವಾರಾಂತ್ಯದ ಕರ್ಪ್ಯೂ ಪರಿಣಾಮ ಭಕ್ತರಿಲ್ಲದೆ ಭಣಗುತ್ತಿತ್ತು, ಮೇಲುಕೋಟೆ ಠಾಣೆಯ ಇನ್ಸ್ಪೆಕ್ಟರ್ ಸುಮಾರಾಣಿ ಕಟ್ಟುನಿಟ್ಟಿನ ನಿಯಮ ಅನುಸರಿಸಿದ್ದರು. ಶನಿವಾರ ಬೆಳಿಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ತರಕಾರಿ ಮಾರಾಟಕ್ಕೆ ಅನುಕೂಲಮಾಡಿಕೊಡಲಾಗಿತ್ತು. ಭಕ್ತರ ಪ್ರವೇಶಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಿದಕಾರಣ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಗಿನ 5 ಗಂಟೆಂದಲೇ ನಿತ್ಯಪೂಜಾಕೈಂಕರ್ಯ ಆರಂಭಿಸಿ 8 ಗಂಟೆಯವೇಳೆಗೆ ದೇವಾಲಯ ಮುಕ್ತಾಯಗೊಳಿಸಲಾಗಿತ್ತು. ಕೊಠಾರೋತ್ಸವದ ವಿವಿಧ ಕೈಂಕರ್ಯಗಳು ಸಂಜೆ ದೇವಾಲಯದ ಒಳಪ್ರಾಕಾರದಲ್ಲಿ ಸಂಪ್ರಾದಾಯಿಕವಾಗಿ ನಡೆದವು. ಕೊಠಾರೋತ್ಸವದ ಆಯಿತಿರುಮಾಳಿಗೆವತಿಯಿಂದ ಆಯಿನರಸಿಂಹಾಚಾರ್ ಕುಟುಂಬ ಪುಷ್ಪಕೈಂಕರ್ಯ ಹಾಗೂ ನೇಮಿಸೇವೆಯನ್ನು ಭಕ್ತಿಯಿಂದ ನೆರವೇರಿಸಿದರು. ನಂತರ 12 ಆಳ್ವಾರ್ ಗಳಿಗೆ ವಿಶೇಷ ಮರ್ಯಾದೆ ನೆರವೇರಿತು. ನೇಮಿಸೇವೆಯ ಕುಟುಂಬ ಮತ್ತು ದೇವಾಲಯದ ಸಿಬ್ಬಂದಿಮಾತ್ರ ಉತ್ಸವದಲ್ಲಿ ಭಾಗಿಯಾಗಿದ್ದರು.
ಹೋಬಳಿಯ ಪ್ರಮುಖ ವ್ಯಾಪಾರಕೇಂದ್ರವಾದ ಜಕ್ಕನಹಳ್ಳಿ ಸರ್ಕಲ್ನಲ್ಲಿ ಸಹ ಮೇಲುಕೋಟೆ ಪೊಲೀಸರು ಕಟ್ಟುನಿಟ್ಟಿನ ನಿಯಮ ಅನುಸರಿಸಿ ಜೀವರ್ಗಿ – ಶ್ರೀರಂಗಪಟ್ಟಣ ರಸ್ತೆಯಲ್ಲಿ ಬ್ಯಾರಕೇಡ್ ಗಳನ್ನು ಅಳವಡಿಸಿ ಪ್ರತಿವಾಹನವನ್ನು ತಪಾಸಣೆ ಮಾಡಿ ಕಳುಹಿಸಿದರು. ವಾರಾಂತ್ಯದ ಕರ್ಪ್ಯೂ ಬಗ್ಗೆ ಮಾಹಿತಿ ನೀಡಿದ ಇನ್ಸ್ ಪೆಕ್ಟರ್ ಸುಮಾರಾಣಿ ಇಡೀ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಉಲ್ಲಂಘಿಸಿದ ಪ್ರಕರಣ ನಡೆದಿಲ್ಲ. ಮುಂಚಿತವಾಗಿ ಪ್ರವಾಸಿತಾಣ ಮತ್ತು ಪ್ರಮುಖ ಸ್ಥಳಗಳಲ್ಲಿ ಮೈಕ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಮಾಕ್ಸ್ ಧರಿಸದೆ 100ಕ್ಕೂ ಹೆಚ್ಚುಮಂದಿಗೆ ದಂಡವಿಧಿಸಲಾಗಿದೆ. ನಾಳೆ ಮತ್ತುಷ್ಟು ಬಿಗಿಕ್ರಮ ಜರುಗಿಸಲಾಗುತ್ತಿದ್ದು ಸಾರ್ವಜನಿಕರು ಮತ್ತು ವಾಹನಗಳು ಅನಗತ್ಯವಾಗಿ ರಸ್ತೆಗಿಳಿಯಬಾರದು ಎಂದರು.