ಹೊಸದಿಗಂತ ವರದಿ,ಮಂಡ್ಯ :
ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕೊರೋನಾ ಆವರಿಸಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕೊರೋನಾ ಸೋಂಕಿಗೆ ಒಳಗಾಗಿ ಹೋಂ ಐಸೋಲೇಷನ್ನಲ್ಲಿದ್ದಾರೆ. ಮಂಡ್ಯದಲ್ಲಿ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಮತ್ತು ಆದಿ ಚುಂಚನಗಿರಿಯಲ್ಲಿ ನಡೆದ ರಾಜ್ಯ ಯುವಜನೋತ್ಸವದ ಪರಿಣಾಮ ಪೊಲೀಸರಿಗೆ ಸೋಂಕು ಆವರಿಸಿದೆ ಎಂದು ಹೇಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧನಂಜಯ್, ಡಿವೈಎಸ್ಪಿ ಮಂಜುನಾಥ್, ನಾಗಮಂಗಲ ಡಿವೈಎಸ್ಪಿ ನವೀನ್ಕುಮಾರ್, ಮಳವಳ್ಳಿ ಲಕ್ಷ್ಮೀನಾರಾಯಣ ಪ್ರಸಾದ್, ನಾಗಮಂಗಲ ಸಿಪಿಐ ಸುಧಾಕರ್, ಬೆಳ್ಳೂರು ಪಿಎಸ್ಐ ರಾಮಚಂದ್ರು ಸೇರಿದಂತೆ ಹಲವರಿಗೆ ಸೋಂಕು ಹರಡಿದೆ.
ಹಿರಿಯ ಪೊಲೀಸ್ ಅಕಾರಿಗಳಿಗೆ ಸೋಂಕು ದೃಢಪಟ್ಟ ಹಿನ್ನೆಲಯಲ್ಲಿ ಹೋಂ ಐಸೋಲೇಷನ್ ಸೇರಿಕೊಂಡಿದ್ದಾರೆ. ಕೆಲವರು ಪರೀಕ್ಷೆ ಮಾಡಿಸಿ ಹೋಂ ಐಸೋಲೇಷನ್ನಲ್ಲಿದ್ದರೆ ಇನ್ನು ಹಲವರಿಗೆ ಸೋಂಕಿನ ಲಕ್ಷಣವಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಮಂಡ್ಯದ ಡಿಎಆರ್ ಆವರಣದಲ್ಲಿ ನಡೆದಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳು, ಆನಂತರ ನಾಗಮಂಗಲ ತಾಲೂಕು ಆದಿ ಚುಂಚನಗಿರಿಯಲ್ಲಿ ನಡೆದ ರಾಜ್ಯ ಯುವಜನೋತ್ಸವದ ಭದ್ರತೆಗೆ ನಿಯೋಜನೆಗೊಂಡಿದ್ದರು.ಹಿರಿಯ ಅಕಾರಿಗಳಿಗೆ ಸೋಂಕು ದೃಢಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಪೊಲೀಸ್ ಇಲಾಖೆ ಸಿಬ್ಬಂದಿಯಲ್ಲಿ ಕೊರೋನಾ ಆತಂಕ ಮನೆ ಮಾಡಿದೆ.
ಮಂಡ್ಯ ಜಿಲ್ಲೆಯ ಹಿರಿಯ ಪೊಲೀಸರಿಗೆ ಕೊರೋನಾ ಆವರಿಸಿರುವ ಹಿನ್ನೆಲಯಲ್ಲಿ ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಮಂಡ್ಯ ಪೊಲೀಸ್ ಇಲಾಖೆಯ ಆಡಳಿತದ ಹೊಣೆ ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.