ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಹೊಸಕಂಬಿಯಲ್ಲಿ ಸೋಮವಾರ ಗಂಗಾವಳಿ ನದಿಯ ದಂಡೆಯಲ್ಲಿ ನಡೆದು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿಯ ಮೃತ ದೇಹ ಮಂಗಳವಾರ ಬೆಳಗ್ಗೆ ತಾಲೂಕಿನ ಬೆಳಂಬಾರ ಬಳಿ ಪತ್ತೆಯಾಗಿದೆ.
ಹೊಸಕಂಬಿ ನಿವಾಸಿ ಈಶ್ವರ ಸೂರಾ ನಾಯ್ಕ (66) ಮೃತ ವ್ಯಕ್ತಿಯಾಗಿದ್ದು, ಕೃಷಿಕನಾಗಿದ್ದ ಈತ ತರಗೆಲೆ ತರಲು ಮನೆ ಸಮೀಪದ ಕಾಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ನದಿಯಲ್ಲಿ ಬಿದ್ದು ಕಣ್ಮರೆಯಾಗಿದ್ದ.
ಸೋಮವಾರ ಅಂಕೋಲಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ವತಿಯಿಂದ ಗಂಗಾವಳಿ ನದಿಯ ಸುತ್ತ ಮುತ್ತ ಶೋಧ ಕಾರ್ಯ ನಡೆಸಲಾಗಿತ್ತು.
ಅಂಕೋಲಾ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಕಾರಣ ಗಂಗಾವಳಿ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು ನೀರಿನ ಹರಿವಿನೊಂದಿಗೆ ಸಮುದ್ರ ಸೇರಿದ ಮೃತ ದೇಹ ಬೆಳಂಬಾರ ಬಳಿ ಉತ್ತರ ಖಾರ್ವಿವಾಡ ಕಡಲ ತೀರದಲ್ಲಿ ಪತ್ತೆಯಾಗಿದೆ.
ತಂದೆ ನದಿ ನೀರಿನಲ್ಲಿ ಕಣ್ಮರೆಯಾದ ಕುರಿತು ಮೃತ ವ್ಯಕ್ತಿಯ ಮಗನಿಂದ ಸೋಮವಾರ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ