ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಚಿಕಿತ್ಸೆಗಾಗಿ ಕರೆತಂದಿದ್ದ ವ್ಯಕ್ತಿಯೊಬ್ಬ ಯುವ ವೈದ್ಯೆಯನ್ನ ಇರಿದು ಹತ್ಯೆ ಮಾಡಿದ ಘಟನೆ ನಡೆದಿದ್ದು, ಇದರ ಬೆನ್ನಲ್ಲೇ ಕೇರಳದಲ್ಲಿ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಯನ್ನು ಚಿಕಿತ್ಸೆಗಾಗಿ ಕರೆತಂದಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿದ್ದನು.
ವೈದ್ಯೆಯ ಹತ್ಯೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ಡಾಕ್ಟರ್ಗಳು ಮುಷ್ಕರಕ್ಕೆ ಮುಂದಾಗಿದ್ದು ಮೇ 11ರಂದು ಒಂದು ದಿನದ ಧರಣಿಗೆ ಕರೆ ನೀಡಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(IMA) ಅಧ್ಯಕ್ಷ ಡಾ. ಸುಲ್ಫಿ ನುಹೂ ಕಳೆದ ಕೆಲ ಸಮಯದಿಂದ ವೈದ್ಯರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಸರ್ಕಾರ ಕೂಡ ಕಠಿಣ ಕಾನೂನು ಜಾರಿಗೆ ತರುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ನೀಡುವುದಾಗಿ ಹೇಳುತ್ತಿದೆ.
ಮೇ. 10 ರ ಬುಧವಾರ ಮುಂಜಾನೆ ಸಂಭವಿಸಿದ ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಕೊಲ್ಲಂ ಜಿಲ್ಲೆಯ 42 ವರ್ಷದ ಶಾಲಾ ಶಿಕ್ಷಕನಾಗಿರುವ ಆರೋಪಿ ಸಂದೀಪ್ ಮಾದಕ ವಸ್ತು ಸೇವನೆಯಿಂದ ಡಿ-ಅಡಿಕ್ಷನ್ ಥೆರಪಿಗೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾಗ ದುರಂತ ಘಟನೆ ನಡೆದಿದೆ. ಕೊಟ್ಟಾಯಂ ಮೂಲದ ಡಾ. ವಂದನಾ ದಾಸ್ ಕುತ್ತಿಗೆ, ತಲೆ ಮತ್ತು ಬೆನ್ನುಮೂಳೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ. ವಂದನಾ ಕೊಲ್ಲಂ ಅಜೀಜಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದರು. ತಾಲೂಕು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. ವಂದನಾ ಅವರನ್ನು ತಕ್ಷಣ ತಿರುವನಂತಪುರಂನ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಸಾವನ್ನಪ್ಪಿದ್ದರು.