ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಮತ್ತು ತಮಿಳುನಾಡು ನಡುವೆ ಮೇಕೆದಾಟು ಯೋಜನೆ ಹಾಗೂ ನೀರು ಹಂಚಿಕೆ ವಿವಾದಕ್ಕೆ ದಶಕಗಳ ಇತಿಹಾಸವಿದೆ. ಆದರೆ ಪ್ರಸ್ತುತ ವರ್ಷ ಜೂನ್ ತಿಂಗಳಲ್ಲೂ ಕೊಡಗು ಜಿಲ್ಲೆಯಲ್ಲಿ ಆಶಾಜನಕ ಮಳೆಯಾಗದ ಕಾರಣ, ಕಾವೇರಿ ನದಿಯ ಒಡಲು ಸಂಪೂರ್ಣವಾಗಿ ಬರಿದಾಗುತ್ತಿದ್ದು ಕರ್ನಾಟಕಕ್ಕೆ ಆತಂಕ ಮೂಡಿಸಿದೆ.
ಅರ್ಧ ಅಡಿಗೆ ಕುಸಿದ ನದಿ ಹರಿವು
ಕೊಡಗು-ಮೈಸೂರು ಗಡಿಯ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಹರಿವು ಗಣನೀಯವಾಗಿ ಕುಸಿದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 10 ರಿಂದ 15 ಅಡಿ ತುಂಬಿ ಹರಿಯಬೇಕಿದ್ದ ನದಿಯಲ್ಲಿ ಈಗ ಕೇವಲ ಅರ್ಧದಿಂದ ಒಂದು ಅಡಿ ಮಾತ್ರ ನೀರಿದೆ. ಜಲಮಾಪಕದಲ್ಲಿ ನೀರಿನ ಮಟ್ಟ ಶೂನ್ಯಕ್ಕೆ ತಲುಪಿದ್ದು, ನದಿಯ ಒಳಗೆ ಕಲ್ಲುಗಳು ಎದ್ದುಕಾಣುತ್ತಿವೆ.
ಬೆಂಗಳೂರು, ಮೈಸೂರಿಗೆ ಜಲಸಂಕಷ್ಟದ ಭೀತಿ
ಕಾವೇರಿಯ ಪ್ರಮುಖ ಜಲಾಶಯಗಳಾದ ಕೆಆರ್ಎಸ್ (KRS) ಮತ್ತು ಹಾರಂಗಿ ಇನ್ನೂ ಭರ್ತಿಯಾಗಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತಮಿಳುನಾಡಿಗೆ ನೀರು ಬಿಡುವುದು ಹಾಗಿರಲಿ, ಬೆಂಗಳೂರು ಮತ್ತು ಮೈಸೂರಿನಂತಹ ಮಹಾನಗರಗಳಲ್ಲೇ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪರದಾಡಬೇಕಾದ ಭೀಕರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.



