ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಈ ಕ್ಷಣ ಎಲ್ಲೆಡೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ನಾಳೆ (ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ.
ಇದರ ನಡುವೆ ಪಾಕ್ ಕೃಪಾ ಪೋಷಿತ ಭಯೋತ್ಪಾದಕ ಸಂಟನೆಗಳು ಸ್ವಾತಂತ್ರ್ಯ ದಿನಾಚರಣೆಗೆ ದಾಳಿ ಮಾಡಲು ಸಂಚು ರೂಪಿಸಿದೆ. ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತೊಬ್ಯಾ, ಜೈಶ್ ಇ ಮೊಹಮ್ಮದ್ ಸಂಘಟನೆಗಳು ದಾಳಿಗೆ ಸಜ್ಜಾಗಿದೆ. ಈ ಕುರಿತು ಭಾರತದ ಗುಪ್ತಚರ ಇಲಾಖೆ ಭದ್ರತಾ ಪಡೆಗಳಿಗೆ ರವಾನಿಸಿದೆ. ಇದರ ಬೆನ್ನಲ್ಲೇ ದೇಶದ ಹಲವೆಡೆ ಹೈಅಲರ್ಟ್ ಘೋಷಿಸಲಾಗಿದೆ.
ಉಗ್ರರು ಸ್ವಾತಂತ್ರ್ಯ ದಿನಾಚರಣೆಯಂದೇ ದಾಳಿಗೆ ಸಜ್ಜಾಗಿದ್ದಾರೆ. ಪಾಕಿಸ್ತಾನ ಉಗ್ರ ಸಂಘಟನೆ ದಾಳಿ ಜೊತೆಗೆ ಭಾರತದೊಳಗೆ ಸಂಘರ್ಷ ಸೃಷ್ಟಿಸಿ ಹಿಂಸಾಚಾರ ನಡೆಸುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಹೇಳಿದೆ. ಫೆಬ್ರವರಿ ತಿಂಗಳಲ್ಲೇ ಭಾರತದ ಸ್ವಾತಂತ್ರ್ಯ ದಿನಾಚರಣೆ ಮೇಲಿನ ದಾಳಿಗೆ ಪಾಕಿಸ್ತಾನ ಉಗ್ರ ಸಂಘಟನೆಗಳು ಸಜ್ಜಾಗಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಸಂಗ್ರಹಿಸಿದೆ. ಕೆಂಪುಕೋಟೆ ಸುತ್ತಮುತ್ತ ಭಾರಿ ಭದ್ರತೆ ಇರುವ ಕಾರಣ ದೆಹಲಿಯ ಸಾರ್ವಜನಿಕ ಪ್ರದೇಶದ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ.
ಗುಪ್ತಚರ ಮಾಹಿತಿಯಿಂದ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.