August 26, 2026
Wednesday, August 26, 2026
spot_img

ಸರ್ಕಾರಕ್ಕೆ ರಾಜ್ಯದ ರೈತರ ಕಣ್ಣೀರು ಕಾಣಿಸುತ್ತಿಲ್ಲ, ದೆಹಲಿಯಲ್ಲಿ ಮಜಾ ಮಾಡ್ತಿದ್ದಾರೆ :ಆರ್‌. ಅಶೋಕ್‌

ಹೊಸದಿಗಂತ ವರದಿ ಬಳ್ಳಾರಿ:

ಪ್ರಸಕ್ತ ವರ್ಷ ಮುಂಗಾರು ಮುನಿಸಿಕೊಂಡ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದ ಬರ ಅಧ್ಯಯನ ತಂಡದ ಸದಸ್ಯರು ಗಣಿನಾಡು ಬಳ್ಳಾರಿ ಜಿಲ್ಲೆಯ ಸಿದಗಿನಮೊಳ ಗ್ರಾಮದ ರೈತರ ಜಮೀನುಗಳಿಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಕಾರೆಕಲ್ಲು ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ, ಹತ್ತಿ, ತೊಗರಿ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆ ದೇಶಕ್ಕೆ ಅಣ್ಣ ನೀಡುವ ರೈತರ ಸಂಕಷ್ಟ ಹೇಳತೀರದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕರುಣನೇ ಇಲ್ಲ, ದೆಹಲಿಯಲ್ಲಿ ಮಜಾ ಉಡಾಯಿಸುತ್ತಿದ್ದಾರೆ, ಕಾವೇರಿ ನೀರು ಬಿಡುಗಡೆ ಕುರಿತು ಗಮನಹರಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲೆ ಸೇರಿ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಜನ ಕೂಲಿ ಅರೆಸಿ ಗುಳೆ ಹೊರಟಿದ್ದಾರೆ, 3-4 ಅಡಿ ಎತ್ತರಕ್ಕೆ ಬೆಳೆಯಬೇಕಾಗಿದ್ದ ಜೋಳ, ತೊಗರಿ, 50 ದಿನಗಳು ಕಳೆದರೂ ಮೇಲಕ್ಕೆದ್ದಲ್ಲ,
ಸಂಕಷ್ಟದಲ್ಲಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರ ಮಾಡಿಲ್ಲ. ಅಧ್ಯಯನ ಮಾಡಿ ಸರ್ಕಾರ ಬರ ಘೋಷಣೆ ಮಾಡಿಲ್ಲ. ಡಿಸಿ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಕೂಡಲೇ ರೈತರಿಗೆ ಸಮರ್ಪಕ ಪರಿಹಾರ ವಿತರಿಸಬೇಕು, ಬರ ಘೋಷಣೆ ಮಾಡಬೇಕು, ಜನರಿಗೆ ಕುಡಿವ ನೀರಿನ ಬವಣೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !