ಹೊಸದಿಗಂತ ವರದಿ ಹುಬ್ಬಳ್ಳಿ:
ಇಡೀ ದೇಶದಲ್ಲಿ ಯಾವ ಪಕ್ಷವೂ ಇಷ್ಟೊಂದು ಗ್ಯಾರಂಟಿ ಆಶ್ವಾಸನೆ ನೀಡಿಲ್ಲ. ಆದರೆ ಕಾಂಗ್ರೆಸ್ ನೀಡಿದೆ. ಭರವಸೆ ಈಡೇರಿಸುವುದು ಅಸಾಧ್ಯವೆಂದು ವಿರೋಧ ಪಕ್ಷ ಹೇಳುತ್ತಿದ್ದು, ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅದನ್ನು ಸಾಧ್ಯ ಮಾಡಿ ತೊರಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಜಗದೀಶ ಶೆಟ್ಟರ ಹೇಳಿದರು.
ಮಂಗಳವಾರ ಕೇಶ್ವಾಪುರದಲ್ಲಿ ಹು-ಧಾ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಪ್ರಮುಖರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.
ಐದು ಗ್ಯಾರಂಟಿ ಭರವಸೆಯಲ್ಲಿ ಮೂರು ಭರವಸೆ ಸದ್ಯ ಈಡೇರಿಸಿದರೆ ಸಾಕು ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವುದರಲ್ಲಿ ಅನುಮಾನವಿಲ್ಲ. ನೀಡಿದಂತ ಗ್ಯಾರಂಟಿ ಏಕಾಏಕಿ ಈಡೇರಿಸಲು ಸಾಧ್ಯವಿಲ್ಲ. ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.
ಇನ್ನೂ ಕಳೆದ ಬಾರಿ ಬಜೆಟ್ ಬಿಜೆಪಿ ಮಾಡಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಬಜೆಟ್ ಮಾಡಿ ಎಲ್ಲ ಭರವಸೆ ಈಡೇರಿಸುತ್ತದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಹು-ಧಾ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದಲ್ಲಿ ಸೋತಿರಬಹುದು ಆದರೆ ರಾಜ್ಯದಲ್ಲಿ ಗೆದ್ದಿದೆ. ದೆಹಲಿಯಲ್ಲಿ ಇರುವ ಬಿಜೆಪಿ ನಾಯಕರು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಸದ್ಯ ಅವರಿಗೆ ಗೊತ್ತಾಗಿದೆ. ಜನರ ಮನಸ್ಸು ಮಾಡಿದರೆ ರಾಜಕೀಯವಾಗಿ ಏನಾದರೂ ಬದಲಾವಣೆ ತರಬಹುದು ಎಂದರು.
ಮುಂದೆ ಬರುವ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕಿದೆ. ಸೋತ ಕಾರಣ ಸುಮ್ಮನಿರುವ ಪ್ರಶ್ನೆ ಇಲ್ಲ ಲೋಕಸಭಾ ಚುನಾವಣೆಯಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ಸದ್ಯ ರಾಜ್ಯದಲ್ಲಿ ೨೫ ಸಂಸದರಿದ್ದು, ಬರುವ ದಿನದಲ್ಲಿ ಅದು ಬದಲಾಗಲಿದೆ ಎಂದು ಹೇಳಿದರು.