ಹೊಸದಿಗಂತ ವರದಿ,ಮೈಸೂರು:
ಪತ್ನಿ ಮೇಲೆ ಅನುಮಾನ ಪಟ್ಟು ಆಕೆಯನ್ನ ಕೊಲೆಗೈದಿದ್ದ ವ್ಯಕ್ತಿಯೊಬ್ಬನಿಗೆ ೭ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮೈಸೂರಿನ ೭ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಿಮಂಟಪ ಸಿ-ಬಡಾವಣೆಯಲ್ಲಿ ವಾಸವಿದ್ದ ರಾಜೇಶ್(೩೫) ಶಿಕ್ಷೆಗೆ ಒಳಗಾದವ. ಪತ್ನಿ ರಾಧಾ ತನ್ನ ಗಂಡ ರಾಜೇಶ್ ಮತ್ತು ಮಕ್ಕಳೊಂದಿಗೆ ನರಸಿಂಹರಾಜ ಸಿ-ಬಡಾವಣೆಯಲ್ಲಿ ವಾಸವಿದ್ದರು. ಈ ಮಧ್ಯೆ ರಾಜೇಶ್ ಪತ್ನಿ ರಾಧಾ ಅವರ ಮೇಲೆ ಇಲ್ಲಸಲ್ಲದ ಅನುಮಾನ ಪಟ್ಟು ಮೊಬೈಲ್ ಅನ್ನು ಕಿತ್ತುಕೊಂಡು ತಾನೇ ಇಟ್ಟುಕೊಂಡಿದ್ದನು.
ಅಲ್ಲದೆ ಪತ್ನಿ ರಾಧಾ ಒಳೊಳ್ಳೆ ಬಟ್ಟೆ ಹಾಕಿಕೊಂಡು ರೆಡಿಯಾಗಿ ಓಡಾಡಿದರೂ ಇದನ್ನು ಸಹಿಸದೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಅಲ್ಲದೇ ಸರಿಯಾಗಿ ಕೆಲಸಕ್ಕೆ ಹೋಗದೇ, ಮನೆಯ ಖರ್ಚಿಗೆ ಹಣವನ್ನೂ ನೀಡದೇ ಮನೆಯಲ್ಲಿಯೇ ಇರುತ್ತಿದ್ದನು. ಇದನ್ನು ಪ್ರಶ್ನಿಸಿದ ಪತ್ನಿ ರಾಧಾ ಈ ರೀತಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುವುದಾದರೆ ಊರಿಗೆ ಹೋಗು ಎಂದು ಹೇಳಿದ್ದಾರೆ. ಇದರಿಂದ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದ್ದು, ಈ ಎಲ್ಲಾ ಕಾರಣಗಳಿಂದ ಹಾಗೂ ರಾಧಾಳ ಮೇಲೆ ಇದ್ದ ಅನುಮಾನದಿಂದ ರಾಜೇಶ್ ೨೭-೦೮-೨೦೨೨ ರಂದು ಬೆಳಗಿನ ಜಾವ ಸುಮಾರು ೬-೩೦ ಗಂಟೆ ವೇಳೆ ಕಬ್ಬಿಣದ ಮಚ್ಚಿನಿಂದ ರಾಧಾ ಮೇಲೆ ಬಲಭಾಗದ ತಲೆಗೆ ತೀವ್ರವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದನು.
ಈ ಬಗ್ಗೆ ಮನೆಯ ಮಾಲೀಕರಾದ ಮಮತಾ ನರಸಿಂಹರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂದಿನ ತನಿಖಾಧಿಕಾರಿಯಾಗಿದ್ದ ಅಜರುದ್ದೀನ್, ಪೊಲೀಸ್ ಇನ್ಸ್ಪೆಕ್ಟರ್ ರವರು ತನಿಖೆ ನಡೆಸಿ ಆರೋಪಿತನ ವಿರುದ್ಧ ಕಲಂ ೩೦೨ ಐಪಿಸಿ ರೀತ್ಯಾ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣ ವಿಚಾರಣೆ ನಡೆಸಿದ ಮೈಸೂರನ ೭ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಎಂ.ರಮೇಶ ಅವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಮತ್ತು ದಾಖಲಾತಿಗಳನ್ನು ಪರಿಗಣಿಸಿ, ರಾಜೇಶ್ಗೆ ೭ ವರ್ಷಗಳ ಕಠಿಣ ಸೆರೆಮನೆ ವಾಸ ಮತ್ತು ರೂ.೧,೦೦೦ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಮೈಸೂರಿನ ೭ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ವಾದ ಮಂಡಿಸಿದರು.