ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಾರಾಣಸಿಯ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೊ ಸಮೀಕ್ಷೆ ನಡೆಸಲು ಅನುಮತಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ (ತ್ವರಿತ ಗತಿ ನ್ಯಾಯಾಲಯ- 1) ರವಿ ಕುಮಾರ್ ದಿವಾಕರ್ ಅವರು ಅಪರಿಚಿತ ವಿದೇಶ ಸಂಖ್ಯೆಗಳಿಂದ ಕರೆ ಬರುತ್ತಿವೆ. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
‘ನ್ಯಾಯಾಧೀಶ ದಿವಾಕರ್ ಅವರು ಪತ್ರ ಬರೆದಿದ್ದಾರೆ. ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಗಳಿಂದ ಕರೆ ಬರುತ್ತಿರುವುದು ತಮ್ಮನ್ನು ಆತಂಕಕ್ಕೆ ದೂಡಿದೆ ಎಂದು ಅವರು ಬರೆದಿದ್ದಾರೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಘುಲೆ ಸುಶೀಲ್ ಚಂದ್ರಭಾನ್ ಅವರು ಹೇಳಿದ್ದಾರೆ.
‘ಏಪ್ರಿಲ್ 15ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಕರೆ ಬಂದಿತು. ಕರೆಗೆ ಉತ್ತರಿಸಲಿಲ್ಲ. ಇಲ್ಲಿಯವರೆಗೂ ಕರೆ ಬರುತ್ತಲೇ ಇದೆ ಎಂದು ದಿವಾಕರ್ ಹೇಳಿದ್ದಾರೆ. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸೈಬರ್ ಘಟಕ ಮತ್ತು ಕೋತವಾಲಿ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಘುಲೆ ಹೇಳಿದ್ದಾರೆ.