ಹೊಸದಿಗಂತ ಮಳವಳ್ಳಿ:
ಮೈಸೂರಿನಿಂದ ಮಳವಳ್ಳಿಗೆ ಬರುವ ಕೆಎಸ್ ಆರ್ ಟಿಸಿ ಬಸ್ನಲ್ಲಿ ಪ್ರಯಾಣಿಕರು ಮರೆತು ಬಸ್ ಇಳಿದು ಬಿಟ್ಟು ಹೋಗಿದ್ದ ಬ್ಯಾಗ್ ಹಾಗೂ 8 ಗ್ರಾಂ ಚಿನ್ನದ ಓಲೆಯನ್ನು ಸಂಚಾರಿ ನಿಯಂತ್ರಕ ಎಂ.ಸಿ.ಗೌಡ ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮೈಸೂರಿನಿಂದ ಬನ್ನೂರಿಗೆ ಬರುವ ವೇಳೆ ಬನ್ನೂರಿನ ಸಹನಾ ಎಂಬುವವರು ಬಟ್ಟೆಯ ಬ್ಯಾಗ್ ನಲ್ಲಿ ಸೀರೆ, 8 ಗ್ರಾಂ.ಚಿನ್ನದ ಓಲೆಯನ್ನು ಮರೆತು ಬಸ್ ನಿಂದ ಇಳಿದಿದ್ದರು. ತಕ್ಷಣವೇ ಎಚ್ಚೆತ್ತ ಸಹನಾ ಮಳವಳ್ಳಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.
ಬಸ್ ಮಳವಳ್ಳಿಗೆ ಬರುತ್ತಿದ್ದಂತೆಯೇ ಬ್ಯಾಗ್ ನನ್ನು ವಶಕ್ಕೆ ಪಡೆದ ಸಂಚಾರಿ ನಿಯಂತ್ರಕ ಎಂ.ಸಿ.ಗೌಡ ದಾಖಲೆಗಳನ್ನು ಪರಿಶೀಲಿಸಿ ಚಿನ್ನದ ಓಲೆ ಮತ್ತು ಬಟ್ಟೆಗಳನ್ನು ಸಹನಾ ಅವರಿಗೆ ವಾಪಾಸ್ ನೀಡಿದ್ದಾರೆ.
ಕೆಎಸ್ ಆರ್ ಟಿಸಿ ಅಧಿಕಾರಿಗಳ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.