ಹೊಸದಿಗಂತ ವರದಿ,ಅಂಕೋಲಾ:
ನೌಕಾಪಡೆಯಲ್ಲಿ ಅಂಡಮಾನ್ ನಿಕೋಬಾರ್ ದ್ಶೀಪ ಸಮೂಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮೃತ ಪಟ್ಟಿರುವ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದ ಯೋಧ ನಾಗರಾಜ ಮುಕುಂದ ಕಳಸ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ಕೋಟೆವಾಡದ ರುದ್ರಭೂಮಿಯಲ್ಲಿ ನಡೆಯಿತು.
ಗುರುವಾರ ನಸುಕಿನ ಜಾವ ಅಂಕೋಲಾ ತಾಲೂಕಿಗೆ ತಲುಪಿದ ಪಾರ್ಥಿವ ಶರೀರವನ್ನು ರಕ್ಷಣಾ ವಾಹನದಲ್ಲಿ ಲಕ್ಷ್ಮೇಶ್ವರದ ಐಸ್ ಪ್ಯಾಕ್ಟರಿ, ಕೆ.ಸಿ.ರಸ್ತೆ, ಜೈಹಿಂದ್ ಹೈಸ್ಕೂಲ್ ರಸ್ತೆ, ಕಣಕಣೇಶ್ವರ ಮಾರ್ಗದಲ್ಲಿ ಮೆರವಣಿಗೆ ಮೂಲಕ ಕೋಟೆವಾಡದ ಸ್ಮಶಾನ ಭೂಮಿಗೆ ಸಾಗಿಸಿ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು.
ಮೃತ ನಾಗರಾಜ ಅವರ ತಂದೆ ಮುಕುಂದ ಕಳಸ ಅವರು ಪುತ್ರನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ನೌಕಾಪಡೆ ಸೈನಿಕರು ಪಥ ಸಂಚಲನ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿ ಸೇನಾ ಬ್ಯಾಂಡ್ ವಾದನದ ಗೌರವ ಸಲ್ಲಿಸಿದರು.
ಬೆಳಿಗ್ಗೆ ತಹಶೀಲ್ಧಾರ ಉದಯ ಕುಂಬಾರ,ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ,ಪಿ.ಎಸ್. ಐ ಪ್ರವಿಣಕುಮಾರ್,ಸ್ಥಳೀಯ ಪ್ರಮುಖ ಆರ್.ಟಿ.ಮಿರಾಶಿ, ಸುಜಾತಾ ಗಾಂವಕರ್ ಸೇರಿದಂತೆ ನೂರಾರು ಜನರು ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.