ಮುಖಾಮುಖಿ ಡಿಕ್ಕಿಯಾದ ಲಾರಿಗಳು ಪಲ್ಟಿ: ಚಾಲಕನ ಸ್ಥಿತಿ ಗಂಭೀರ, ಚೆಲ್ಲಾಪಿಲ್ಲಿಯಾದ ಖರ್ಜೂರ

ಹೊಸದಿಗಂತ ವರದಿ ಅಂಕೋಲಾ: 

ಲಾರಿಗಳ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ. ಅಪಘಾತದ ತೀವ್ರತೆಯಿಂದಾಗಿ ಲಾರಿಗಳೆರಡೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಪರಿಣಾಮ ಕೆಲವು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತು.

ಕಲ್ಲಿದ್ದಲು ತುಂಬಿ ಕೊಪ್ಪಳಕ್ಕೆ ಹೊರಟ ಲಾರಿ ಮತ್ತು ಒಣ ಖರ್ಜೂರ ತುಂಬಿ ಮುಂಬೈನಿಂದ ಕೊಚ್ಚಿನ್ ಗೆ ಹೋಗುತ್ತಿದ್ದ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ್ದು ಕಲ್ಲಿದ್ದಲು ತುಂಬಿದ ಲಾರಿ ರಸ್ತೆ ಪಕ್ಕದಲ್ಲಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಮಧ್ಯದಲ್ಲಿ ಉರುಳಿ ಬಿದ್ದಿದೆ.
ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಲಾರಿಯಲ್ಲಿ ಸಿಲುಕಿಕೊಂಡಿದ್ದು, ಸಾಕಷ್ಟು ಪ್ರಯಾಸಪಟ್ಟು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ.

ಖರ್ಜೂರ ತುಂಬಿದ ಲಾರಿ ಸಹ ರಸ್ತೆಯ ಇನ್ನೊಂದು ಬದಿಗೆ ಮುಗುಚಿ ಬಿದ್ದಿದ್ದು ರಾಷ್ಟ್ರೀಯ ಹೆದ್ದಾರಿ ತುಂಬಾ ಕಲ್ಲಿದ್ದಲು ಮತ್ತು ಒಣ ಖರ್ಜೂರ ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದಿವೆ.

ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿಎಸ್ಐ ಪ್ರವಿಣಕುಮಾರ್, ಪ್ರೇಮನಗೌಡ ಪಾಟೀಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಎರಡು ಕ್ರೇನ್ ಮೂಲಕ ಲಾರಿ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!