ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೈಋತ್ಯ ಮುಂಗಾರು ಮಳೆ ಪ್ರವೇಶದ ನಿರೀಕ್ಷೆಯಲ್ಲಿರುವ ರೈತರಿಗೆ ಹವಾಮಾನ ಇಲಾಖೆಯು ಸಿಹಿ ಸುದ್ದಿಯನ್ನು ನೀಡಿದೆ. ಈ ಬಾರಿ ನಿಗದಿತ ದಿನಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಕೇರಳವನ್ನು ಮಳೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಜೂನ್ 1 ರ ಸುಮಾರಿಗೆ ಕೇರಳಕ್ಕೆ ಆಗಮಿಸುವ ಮುಂಗಾರು ಮಳೆಯು ಈ ಬಾರಿ ಮೇ 26 ರಂದು ಪ್ರವೇಶಿಸುವ ಸಾಧ್ಯತೆಯಿದ್ದು, ಇದರಲ್ಲಿ ನಾಲ್ಕು ದಿನಗಳ ಮೊದಲು ಅಥವಾ ನಂತರ ಸಂಭವಿಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಗಾರು ಮಳೆ ಪ್ರವೇಶಿಸಿದ್ದು, ಕೇರಳದತ್ತ ಚಲಿಸುತ್ತಿದೆ. ಒಂದು ವಾರದ ನಂತರ ಮುಂಗಾರು ಮಳೆಯು ಕರ್ನಾಟಕವನ್ನು ಪ್ರವೇಶಿಸುತ್ತದೆ. ಹೀಗಾಗಿ ಜೂನ್ ಮೊದಲ ವಾರದಲ್ಲೇ ಕರ್ನಾಟಕದಲ್ಲಿ ಮುಂಗಾರು ಮಳೆಯ ಆರಂಭವಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.



