ಹೊಸದಿಗಂತ ವರದಿ ಉಡುಪಿ:
ಅಕ್ಟೋಬರ್ 2 ರಂದು ಉಡುಪಿಯಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ನಡೆಯಲಿರುವ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಶುಭಕೋರಿ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ- ಮೇಲ್ ಗಂಗೊಳ್ಳಿ ದಾಕುಹಿತ್ಲು ಹೋಗುವ ಮಾರ್ಗ ಹತ್ತಿರದ ಹರ್ಕೂಟ್ ಜಂಕ್ಷನ್ ಹತ್ತಿರ ಅಳವಡಿಸಿದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಬ್ಯಾನರ್ ಅಳವಡಿಸಿದ್ದ ಸ್ಥಳದ ಹಿಂಬದಿಯಲ್ಲಿ ಎಸ್.ಡಿ.ಪಿ.ಐ ಕಚೇರಿ ಇದ್ದು, ಅದರ ಗೋಡೆಯ ಮೇಲೆ ಎಸ್.ಡಿ.ಪಿ.ಐ ಎಂಬ ಬರಹವಿದೆ. ಆ ಬರಹ ಕಾಣುವ ರೀತಿಯಲ್ಲಿ ಬ್ಯಾನರ್ ಅನ್ನು ಹರಿದು ಹಾಕಲಾಗಿದೆ ಎಂದು ಹಿಂ.ಜಾ.ವೇ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಭೇಟಿ ನೀಡಿ ಹೊಸ ಬ್ಯಾನರ್ ಅನ್ನು ಅಳವಡಿಸಿದ್ದಾರೆ. ಗಂಗೊಳ್ಳಿ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟೇ ದೂರು ದಾಖಲಾಗಬೇಕಿದೆ.