ಹೊಸದಿಗಂತ ವರದಿ, ಮಡಿಕೇರಿ
ಮಹಿಳಾ ಪೀಡಕ ಆರೋಪಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
7ನೇ ಹೊಸಕೋಟೆಯ ತೊಂಡೂರು ನಿವಾಸಿ ಕಬೀರ್ ಎಂಬಾತ ತಡರಾತ್ರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಕೆಲವು ವರ್ಷಗಳಿಂದ 7ನೇ ಹೊಸಕೋಟೆ, ತೊಂಡೂರು ವ್ಯಾಪ್ತಿಯಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಮಹಿಳೆಯರು, ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಕಬೀರ್ ಮಹಿಳಾ ಪೀಡಕನೆಂದು ಕುಖ್ಯಾತಿ ಪಡೆದಿದ್ದ. ಆತ ಈ ವಿಚಾರಕ್ಕೆ ಸಂಬಂಧಿಸಿ ಸುಮಾರು 5 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಕಬೀರ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ.
ಆದರೆ ತನ್ನ ಕುಕೃತ್ಯವನ್ನು ಮುಂದುವರೆಸಿದ್ದ ಆತ, ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಕುಶಾಲನಗರದಿಂದ ಕೆಲಸ ಮುಗಿಸಿ ತೊಂಡೂರಿನ ತನ್ನ ಮನೆಗೆ ಬರುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಅವಳನ್ನು ಎಳೆದಾಡಿ, ಆಕೆಯ ಮೊಬೈಲ್ ಕಸಿದು ಆತ ಪರಾರಿಯಾಗಿದ್ದ.
ಈ ಸಂಬಂಧ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರಲ್ಲದೆ, ರಂಜಾನ್ ಸಮಯವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸುಂಟಿಕೊಪ್ಪದಲ್ಲಿ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿತ್ತು.
ಕೃತ್ಯದ ಬಳಿಕ ಕಾಫಿ ತೋಟಕ್ಕೆ ನುಗ್ಗಿ ಪರಾರಿಯಾಗಿದ್ದ ಆತನಿಗಾಗಿ ಪೊಲೀಸರು ಮತ್ತು ಗ್ರಾಮಸ್ಥರು ಅಕ್ಕಪಕ್ಕದ ತೋಟಗಳಲ್ಲಿ ಕಳೆದೊಂದು ವಾರದಿಂದ ಶೋಧ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ.
ಆದರೆ ಗುರುವಾರ ತಡರಾತ್ರಿ ಮನೆಯ ಅನತಿ ದೂರದ ಅಂಗಡಿಯ ಮುಂಭಾಗದಲ್ಲಿ ಆತ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದರೊಂದಿಗೆ ಮಹಿಳಾ ಪೀಡಕನೊಬ್ಬನ ದುರಂತ ಅಂತ್ಯ ಕಂಡಿದ್ದಾನೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ