ಹೊಸ ದಿಗಂತ ವರದಿ, ಮಡಿಕೇರಿ:
ನದಿಯಲ್ಲಿ ಈಜಲು ತೆರಳಿದ ವ್ಯಕ್ತಿಯೊಬ್ಬರು ನೀರು ಪಾಲಾದ ಘಟನೆ ಬಾಳೆಲೆ ಸಮೀಪದ ಕೊಟ್ಟೆಗೇರಿಯ ಲಕ್ಷ್ಮಣತೀರ್ಥ ನದಿಯಲ್ಲಿ ನಡೆದಿದೆ.
ಮೂಲತಃ ಸೋಮವಾರಪೇಟೆಯ ಬಜೆಗುಂಡಿ ನಿವಾಸಿ, ಬೆಂಗಳೂರು ಜಯನಗರದ ಕುವೆಂಪು ಉದ್ಯಾನವನದಲ್ಲಿ ಗಾರ್ಡನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗಾಡ್ಫ್ರಿ ಲೋಬೊ(32) ಎಂಬವರೇ ಮೃತ ದುರ್ದೈವಿ.
ಬಾಳೆಲೆಯ ಸಂಬಂಧಿಕರ ಮನೆಗೆ ಆಗಮಿಸಿದ್ದ ಗಾಡ್ಫ್ರಿ ಲೋಬೋ, ಗುರುವಾರ ಇಬ್ಬರು ಸಂಬಂಧಿಕರೊಂದಿಗೆ ಲಕ್ಷ್ಮಣತೀರ್ಥ ನದಿಗೆ ಈಜಲು ತೆರಳಿದ್ದಾಗ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟರು ಎಂದು ಹೇಳಲಾಗಿದೆ.
ಲೋಬೊ ತನ್ನ ಪತ್ನಿ ರಾಣಿ ಹಾಗೂ ಒಬ್ಬ ಮಗನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರೆನ್ನಲಾಗಿದೆ.
ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮಡಿಕೇರಿ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.