ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಇಂದ್ರಾಳಿಯಿಂದ ರೈಲ್ವೆ ನಿಲ್ದಾಣ ತೆರಳುವ ರಸ್ತೆಯಲ್ಲಿ ಗರ್ಭಿಣಿ ಮಹಿಳೆಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ರಸ್ತೆಯ ಹೊಂಡಕ್ಕೆ ಬಿದ್ದು, ಸ್ಥಳದಲ್ಲೇ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರಸ್ತೆಯಲ್ಲಿಯೇ ಮಕ್ಕಳಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ನಡೆದಿದೆ.
ಅರೇ ಉಡುಪಿಯಲ್ಲಿ ಇಂತಹ ಘಟನೆಯಾ..? ಎಂದು ಆಶ್ಚರ್ಯ ಪಡಬೇಡಿ. ಅಸಲಿಗೆ ಇದು ಸತ್ಯವಲ್ಲ. ಇಂತಹದೊಂದು ಅಪಾಯವನ್ನು ಅರಿತ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡು ಅವರು ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸಿ ಎಂದು ಆಗ್ರಹಿಸಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿನಿತ್ಯ ಸಾವಿರಾರು ಜನರು ಓಡಾಟುವ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಇಂದ್ರಾಳಿಯಿಂದ ರೈಲು ನಿಲ್ದಾಣವನ್ನು ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದ್ದು, ಎರಡು ವರ್ಷಗಳಿಂದ ಹದಗೆಟ್ಟಿದೆ.
ತೆರೆಮರೆಯಲ್ಲಿ ಸಮಾಜ ಸೇವೆ ಮಾಡುವ ಉಡುಪಿಯ ಜನರು ನಿತ್ಯಾನಂದ ಒಳಕಾಡು ಅವರ ಬಳಿ ಪ್ರತಿಭಟನೆ ನಡೆಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಯಲ್ಲಿ ಪ್ರತಿನಿತ್ಯ ನಿಜ ಜೀವನದಲ್ಲಿ ಅನುಭವಿಸುವ ಸಮಸ್ಯೆಯನ್ನು ಅಣಕು ಪ್ರದರ್ಶನ ನಡೆಸಿದ್ದಾರೆ. ಗರ್ಭಿಣಿ ಸ್ತ್ರೀಯರು ಈ ರಸ್ತೆಯಲ್ಲಿ ಹೋದರೆ ಹೋಂಡಗುಂಡಿಗೆ ವಾಹನ ಬಿದ್ದು ರಸ್ತೆಯಲ್ಲೇ ಹೆರಿಗೆ ಆಗುತ್ತದೆ ಎಂಬೂದನ್ನು ಮಾರ್ಮಿಕವಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ತೆರೆದಿಟ್ಟಿತು. ರಾಜು ಮತ್ತು ಹರೀಶ್ ಅಣಕು ಪ್ರದರ್ಶನದಲ್ಲಿ ನಟಿಸಿದರು.