ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಯೇ ಬಾರದೇ ನೀರಿಗೆ ತೊಂದರೆಯಾಗುತ್ತಿರುವ ರಾಜ್ಯಗಳು ಒಂದುಕಡೆಯಾದ್ರೆ, ನೀರು ಹೆಚ್ಚಾಗಿ ಸಮಸ್ಯೆ ಅನುಭವಿಸುತ್ತಿರುವ ರಾಜ್ಯಗಳು ಮತ್ತೊಂದು ಕಡೆ! ಈ ಲಿಸ್ಟ್ನಲ್ಲಿ ಪಶ್ಚಿಮ ಬಂಗಾಳವೂ ಸೇರಿದ್ದು, ಇಲ್ಲಿ ಬೀಳುತ್ತಿರುವ ಮಳೆಗೆ ಗಂಗೆ ಭೋರ್ಗರೆದು ಹರಿಯುತ್ತಿದ್ದಾಳೆ. ಮಾಲ್ಡಾ ಜಿಲ್ಲೆಯ ರತುವಾ ಭಾಗದಲ್ಲಿ ಭೀಕರ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ನದಿ ಪಾತ್ರದಲ್ಲಿ 150 ವರ್ಷ ಇತಿಹಾಸವಿರುವ ಶಿವನ ದೇಗುಲ ಕೊಚ್ಚಿಹೋಗಿದೆ.
ಮುಲಿರಾಮ್ತೋಲಾ ಭಾಗದಲ್ಲಿ ಭಾರೀ ಮುಂಗಾರು ಮಳೆ ಸುರಿಯುತ್ತಿದ್ದು, ಗಂಗಾ ನದಿ ಉಕ್ಕಿ ಹರಿಯುತ್ತಿದೆ. ಹಳೆಯ ಕಾಲಗಳಿಂದಲೂ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು ದೇವಸ್ಥಾನ ಕುಸಿದು ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದನ್ನು ದೂರದಿಂದಲೇ ನೋಡಿ ಕಣ್ಣೀರಿಟ್ಟಿದ್ದಾರೆ.
ಗ್ರಾಮದ ಏಕೈಕ ಪುರಾತನ ದೇವಾಲಯ ಇದಾಗಿದ್ದು, ಇಡೀ ಗ್ರಾಮಸ್ಥರು ದೇವಾಲಯವನ್ನು ಉಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮರಳಿನ ಚೀಲಗಳನ್ನು ಹಾಕಿ ನದಿಯ ಸವೆತವನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರಕೃತಿಯ ಶಕ್ತಿ ಮುಂದೆ ಮಾನವನ ಪ್ರತೀ ಕೆಲಸವೂ ಶೂನ್ಯವೇ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಬಿಹಾರದಿಂದ ಹರಿದುಬಂದ ಭಾರೀ ನೀರಿನ ಒಳಹರಿವಿನಿಂದಾಗಿ ಫರಕ್ಕಾ ಬ್ಯಾರೇಜ್ನಿಂದ ಸುಮಾರು 12 ಲಕ್ಷ ಕ್ಯುಸೆಕ್ನಷ್ಟು ನೀರನ್ನು ಹೊರಬಿಡಲಾಗಿತ್ತು. ನದಿಯ ನೀರಿನ ಜೊತೆ ಹೊರಬಿಟ್ಟು ನೀರು ಸೇರಿ ರಭಸ ಹೆಚ್ಚಾಗಿತ್ತು. ದೇಗುಲದಿಂದ ದೂರ ನಿಂತು ಜನ ಭಕ್ತಿಯಿಂದ ಕೈಮುಗಿಯುತ್ತಾ, ಭಾವುಕರಾಗಿ ತಮ್ಮ ನೆಚ್ಚಿನ ದೇವಸ್ಥಾನಕ್ಕೆ ವಿದಾಯ ಹೇಳಿದ್ದಾರೆ.



