ಹೊಸ ದಿಗಂತ ವರದಿ, ಗದಗ:
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಇವುಗಳಲ್ಲಿ ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ 4 ರಾಜ್ಯಗಳಲ್ಲಿ ಬಿಜೆಪಿಗೆ ಮತ್ತೆ ಜನಬೆಂಬಲ ವ್ಯಕ್ತವಾಗಿರುವುದು ರಾಷ್ಟ್ರದ ಭವಿಷ್ಯದ ದ್ರಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.
ಒಟ್ಟಾರೆ ಈ ಫಲಿತಾಂಶವನ್ನು ಅವಲೋಕಿಸಿದರೆ ದೇಶದ ಅಭಿವೃದ್ಧಿಯ ಹಿನ್ನಲೆಯಲ್ಲಿ ಡಬಲ್ ಎಂಜಿನ್ ಸರ್ಕಾರವೇ ಅಗತ್ಯ ಎಂಬ ಸಂದೇಶವಿದೆ. ನರೇಂದ್ರ ಮೋದಿ ಅವರ ಸಾರಥ್ಯದ ಪ್ರಗತಿಯ ರಥದ ನಾಗಲೋಟವನ್ನು ಇತರ ಪಕ್ಷಗಳು ಸರಿಗಟ್ಟಲು ಸಾಧ್ಯವೇ ಇಲ್ಲ ಎಂಬುದನ್ನು ಮತದಾರ ಪ್ರಭುಗಳೇ ಈ ಫಲಿತಾಂಶದಲ್ಲಿ ಸ್ಪಷ್ಟಗೊಳಿಸಿದ್ದಾರೆ. ಇತರ ಪಕ್ಷಗಳು ಕೇವಲ ಅಪಪ್ರಚಾರದಲ್ಲಿಯೇ ಮುಳುಗಿದ್ದರೆ, ಬಿಜೆಪಿ ಕಾರ್ಯಕರ್ತರು ಎಲ್ಲ ಮತದಾರ ಬಾಂಧವರ ಮನ-ಮನೆಗಳಿಗೆ ತಲುಪಿ ಅವರ ಕಷ್ಟ ಸಂಕಷ್ಟಗಳಿಗೆ ಸ್ಪಂದಿಸಿದ್ದು ಬಿಜೆಪಿ ಪರವಾದ ಫಲಿತಾಂಶಕ್ಕೆ ವರದಾನವಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ ಅಭಿನಂದಿಸಿದ್ದಾರೆ.