ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಕೊಗ್ರೆ ಶ್ರೀಬೊಮ್ಮಯ್ಯ ದೇವರು ಮತ್ತು ಪರಿವಾರ ದೇವರುಗಳ ನೂತನ ದೇವಾಲಯಗಳ ಶಿಖರ ಕಳಸ ಸ್ಥಾಪನೆ ಕಾರ್ಯಕ್ರಮ ಧಾರ್ಮಿಕ ಕಾರ್ಯ ಪರಿಣಿತ ಹಳದೀಪುರದ ಧರಣೇಂದ್ರ ಜೈನ್ ಅವರ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ನಡೆಯಿತು.
ಬೆಳಿಗ್ಗೆ ಮೀನ ಲಗ್ನದಲ್ಲಿ ಶ್ರೀಬೊಮ್ಮಯ್ಯ ದೇವರ ಶಿಲಾ ದೇಗುಲದ ಶಿಖರಕ್ಕೆ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಕಲಶ ಸ್ಥಾಪನೆ ಮಾಡಲಾಯಿತು.
ಮಂಗಳವಾರ ಸಂಜೆ ಬಾಸಗೋಡದ ಗಾಂಧಿ ಮಂದಿರದ ಬಳಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಖಾದಿ ಹಾರ ಗೌರವ ಸಮರ್ಪಿಸಿ ದೇವಾವಯಗಳ ಶಿಖರ ಕಲಶ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಚಂಡೆ ವಾದ್ಯ, ಪಂಚವಾದ್ಯ ಹಾಲಕ್ಕಿ ಗುಮಟೆ ಪಾಂಗ್, ಮರಕಾಲ ಕುಣಿತ, ವಿವಿಧ ವೇಷ ಭೂಷಣಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಪೂರ್ಣ ಕುಂಭ ಸಹಿತ ನೂರಾರು ಜನ ಮಹಿಳೆಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು, ಪಾಲ್ಗೊಂಡಿದ್ದರು.
ಸುಮಾರು 300 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿ ಶಿಖರ ಕಲಶಗಳನ್ನು ಕೊಗ್ರೆ ಗುಡ್ಡಕ್ಕೆ ತಂದು ಶುದ್ದಿ ಹವನ ಕ್ಷೇತ್ರಪಾಲಾರಾಧನೆ ಮೊದಲಾದ ವಿಧಿಗಳನ್ನು ನಡೆಸಲಾಯಿತು.
ಇಂದು ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಕಲಾಭಿವೃದ್ಧಿ ಹವನ ನಡೆಯಲಿದೆ.