ಹೊಸದಿಗಂತ ವರದಿ,ಬೆಂಗಳೂರು:
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ, ಮಾಜಿ ಸಚಿವ ಕೆ. ಗೋಪಾಲಯ್ಯ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಆರೋಪದಡಿ ಬಿಬಿಎಂಪಿ ಬಸವೇಶ್ವರನಗರ ವಾರ್ಡ್ನ ಮಾಜಿ ಕಾರ್ಪೋರೇಟರ್ ಪದ್ಮರಾಜ್ ವಿರುದ್ದನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ಪದ್ಮರಾಜು ಕೋರ್ಟ್ ಮೂಲಕ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದಾರೆ.
ಫೆ. 13 ರ ತಡರಾತ್ರಿ 11 ಗಂಟೆ ಸುಮಾರಿಗೆ ಗೋಪಾಲಯ್ಯ ಅವರಿಗೆ ಕರೆ ಮಾಡಿದ ಪದ್ಮರಾಜ್, ತಮಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಗೋಪಾಲಯ್ಯ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?
ಗೋಪಾಲಯ್ಯ ಹಾಗೂ ಪದ್ಮರಾಜ್ ನಡುವೆ ಯಾವುದೇ ಹಣಕಾಸಿನ ವ್ಯವಹಾರ ಇರಲಿಲ್ಲವಾದರೂ ನನಗೆ ಕರೆ ಮಾಡಿ ಹಣವನ್ನು ನೀಡಬೇಕು. ನೀಡದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಹುಡುಗರನ್ನು ಕರೆಸಿ ಇಡೀ ಕುಟುಂಬವನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಕುಟುಂಬಕ್ಕೆ ಹಾನಿಯಾದರೆ ಅದಕ್ಕೆ ನೇರವಾಗಿ ಪದ್ಮರಾಜ್ ಹೊಣೆಗಾರರಾಗಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪದ್ಮರಾಜ್ಗೆ ಠಾಣಾ ಜಾಮೀನು
ಪ್ರಕರಣ ಸಂಬಂಧ ಬುಧವಾರ ಬೆಳಗ್ಗೆಯೇ ಆರೋಪಿ ಪದ್ಮರಾಜು ಅವರನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೂಡಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆ ವೇಳೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪದ್ಮಾರಾಜುಗೆ ವಿಚಾರಣೆ ನಡೆಸಿದ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪದ್ಮರಾಜ್, ಗುತ್ತಿಗೆ ಕೆಲಸ ಕೊಡಿಸುವ ಸಂಬಂಧ ಗೋಪಾಲಯ್ಯ 15 ಲಕ್ಷ ರೂ. ಪಡೆದುಕೊಂಡಿದ್ದರು. ಆದರೆ, ಯಾವುದೇ ಗುತ್ತಿಗೆ ಕೆಲಸ ಕೊಡಿಸಿಲ್ಲ. ಜತೆಗೆ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ತಡರಾತ್ರಿ ಕರೆ ಮಾಡಿ ಹಣ ಕೊಡುವಂತೆ ಕೇಳಿದಾಗ ಅವರು ಏರುಧ್ವನಿಯಲ್ಲಿ ಮಾತಾಡಿದರು. ಹಾಗಾಗಿ ಬೇಸರಗೊಂಡು ಮಾತನಾಡಿದ್ದೇನೆ ಎಂದು ಹೇಳಿದರು.
ನೀಡಿದ ಹಣಕ್ಕೆ ದಾಖಲೆ ಇಲ್ಲ:
ಪದ್ಮರಾಜ್, ಕೆ. ಗೋಪಾಲಯ್ಯಗೆ ಕೊಟ್ಟಿದ್ದಾನೆ ಎನ್ನಲಾದ 15 ಲಕ್ಷ ರೂಗೆ ಯಾವುದೇ ದಾಖಲೆ ಇಲ್ಲ. ಈ ಪೈಕಿ ಸ್ವಲ್ಪ ಹಣವನ್ನು ನಗದು ರೂಪದಲ್ಲಿ, ಇನ್ನೊಂದಷ್ಟು ಹಣವನ್ನು ಚೆಕ್ ರೂಪದಲ್ಲಿ ನೀಡಿದ್ದೇನೆ ಎಂದ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.