ದಿಗಂತ ವರದಿ ವಿಜಯಪುರ:
ಬಸ್ ನ ಕ್ಯಾರಿಯರನಲ್ಲಿ ಇಟ್ಟಿದ್ದ ಕ್ಯಾರಿಬ್ಯಾಗ್ ಬದಲಾಗಿ 35 ಗ್ರಾಂ ಚಿನ್ನಾಭರಣ, 3 ಸಾವಿರ ನಗದು ಕಳೆದುಕೊಂಡ ಮಹಿಳೆಗೆ ಮತ್ತೆ ಮರಳಿ ಚಿನ್ನಾಭರಣ ದೊರೆತಿರುವ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಫಜಲಪೂರದಿಂದ ಬದಾಮಿಗೆ ತೆರಳುತ್ತಿದ್ದ ಕೆಎ 25 ಎಫ್ 03 ಸಾರಿಗೆ ಬಸ್ ನಲ್ಲಿ,
ಬಸವನಬಾಗೇವಾಡಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಶಿಲ್ಪಾ ಬಾಗೇವಾಡಿ ಎಂಬುವರು ಚಿನ್ನಾಭರಣ ಇಟ್ಟಿದ್ದ ಕ್ಯಾರಿಬ್ಯಾಗ್ ಬದಲು ಆಗಿದೆ.
ಶಿಲ್ಪಾ ಬಾಗೇವಾಡಿ ಎಂಬುವರು ಕ್ಯಾರಿ ಬ್ಯಾಗ್ ನಲ್ಲಿ ಚಿನ್ನಾಭರಣ ಇಟ್ಟು ಬಸ್ ನ ಕ್ಯಾರಿಯರ್ ಮೇಲಿಲ್ಲಿಟ್ಟಿದ್ದರು. ಬಳಿಕ ಕುದರಿಸಾಲವಾಡಗಿ ಗ್ರಾಮದಲ್ಲಿ ಬಸ್ ಏರಿದ ಶಾರದಾ ಎಂಬ ಮಹಿಳೆಯೂ ಕ್ಯಾರಿಬ್ಯಾಗ್ ವೊಂದನ್ನು ಬಸ್ ಕ್ಯಾರಿಯರ್ ಮೇಲಿಟ್ಟಿದ್ದರು.
ಶಾರದಾ ಕುದರಿಸಾಲವಾಡಗಿ ಗ್ರಾಮದಿಂದ ನಿಡಗುಂದಿ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದರು.
ನಿಡಗುಂದಿಯಲ್ಲಿ ತಮ್ಮ ಕ್ಯಾರಿ ಬ್ಯಾಗ್ ಬದಲಾಗಿ ಶಿಲ್ಪಾ ಬಾಗೇವಾಡಿ ಅವರ ಚಿನ್ನಾಭರಣವಿದ್ದ ಕ್ಯಾರಿಬ್ಯಾಗ್ ತೆಗೆದುಕೊಂಡು ಶಾರದಾ ಬಸ್ಸಿನಿಂದ ಕೆಳಗಿಳಿದಿದ್ದಾರೆ.
ಬಳಿಕ ಕ್ಯಾರಿ ಬ್ಯಾಗ್ ಬದಲಾಗಿದ್ದನ್ನು ಕಂಡು ನಿಡಗುಂದಿ ಬಸ್ ನಿಲ್ದಾಣದಲ್ಲಿ ಶಿಲ್ಪಾ ಮಕ್ಕಳೊಂದಿಗೆ ಕುಳಿತು ರೋಧಿಸುತ್ತಿದ್ದಾಗ, ಸ್ಥಳೀಯ ನಿವಾಸಿ ಮೆಹಬೂಬ ವಾಲೀಕಾರ ಎಂಬುವವರು ಶಿಲ್ಪಾ ಅವರು ಅಳುತ್ತಿರುವುದನ್ನು ಕಂಡು ಬಾಗೇವಾಡಿ ಪೊಲೀಸರ ಸಹಾಯವಾಣಿ
112 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಮೆಹಬೂಬ ಹಾಗೂ ಮಲ್ಲಯ್ಯ ಅವರನ್ನು, ಸ್ಥಳಕ್ಕೆ ಬಂದ 112 ಸಹಾಯವಾಣಿಯ ಗಿರೀಶ ಛಲವಾದಿ, ಮಲ್ಲಯ್ಯ ಮಠ ಹಾಗೂ ಶಿವಾನಂದ ಮಟ್ಯಾಳ ಅವರು ವಿಚಾರಣೆ ನಡೆಸಿ, ಮಾಹಿತಿ ಪಡೆದಿದ್ದಾರೆ.
ಅತ್ತ ಬಸ್ ನಿಂದ ಇಳಿದು ಹೋಗಿದ್ದ ಶಾರದಾ ಕ್ಯಾರಿಬ್ಯಾಗ್ ನಲ್ಲಿದ್ದ ಚಿನ್ನಾಭರಣ ನಗದು ಕಂಡು ಆಶ್ಚರ್ಯಗೊಂಡಿದ್ದಾಳೆ.
ಬಸ್ ನಲ್ಲಿದ್ದ ಕ್ಯಾರಿಬ್ಯಾಗ್ ಬದಲಾವಣೆ ಆಗಿದೆ ಎಂದು ಅರಿತ ಶಾರದಾ ಅವರು ಕ್ಯಾರಿಬ್ಯಾಗ್ ನಲ್ಲಿದ್ದ ಶಿಲ್ಪಾ ಬಾಗೇವಾಡಿ ಅವರ ಆಧಾರ್ ಕಾರ್ಡ್ ಆಧಾರದ ಮೇಲೆ ಅವರ ಮೊಬೈಲ್ ನಂಬರ್ ಪಡೆದು ಕರೆ ಮಾಡಿದ್ದಾರೆ.
112 ಪೊಲೀಸರೊಂದಿಗೆ ಶಾರದಾ ಇದ್ದ ಸ್ಥಳಕ್ಕೆ ತೆರಳಿದ ಶಿಲ್ಪಾ ಅವರು 35 ಗ್ರಾಂ ಚಿನ್ನಾಭರಣ, 3 ಸಾವಿರ ನಗದು ವಾಪಸ್ ಪಡೆದಿದ್ದಾರೆ.