ದೇಶ ದ್ರೋಹಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿದೆ ರಾಜ್ಯ ಸರಕಾರ: ಆರ್.ಅಶೋಕ್ ವಾಗ್ದಾಳಿ

ಹೊಸದಿಗಂತ ವರದಿ,ಹಾಸನ :

ರಾಜ್ಯವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಕರ್ನಾಟಕ ಭಯೋತ್ಪಾದಕರ ತಾಣವಾಗುತ್ತಿದೆ. ಜೈಶ್ರೀರಾಮ್ ಎಂದು ಕೂಗಿದ್ದಕ್ಕೆ ಕಾರು ತಡೆದು ಹಲ್ಲೆ ಮಾಡಿಸುತ್ತಾರೆ. ಈ ಸರ್ಕಾರ ಬಂದ ಮೇಲೆ ಕಿಡಿಗೇಡಿಗಳಿಗೆ ಮಣೆ ಹಾಕಿ ಕೊಟ್ಟು ಕೂರಿಸಿದಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಗುರುವಾರ ರೋಡ್ ಶೋ ನಡೆಸಿದ ಅವರು ಹೇಮಾವತಿ ಪ್ರತಿಮೆ ಬಳಿ ಮಾತನಾಡಿ, ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ಹೆಚ್ಚಾಗಿದೆ. ವಿಧಾನಸೌಧದಲ್ಲೇ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಅಂತಹ ದೇಶ ದ್ರೋಹಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಾರೆ. ಪರ ದೇಶದ ಘೋಷಣೆ ಕೂಗಿದವರ ಪರ ವಕಾಲತ್ತು ವಹಿಸಲು ಸಚಿವರು ನಾ ಮುಂದು ತಾ ಮುಂದು ಎಂದು ಹೊರಟಿದ್ದನ್ನು ನೋಡಿದ್ದೇವೆ. ರಾಮೇಶ್ವರ ಕೆಫೆ ಸ್ಫೋಟದ ಬಗ್ಗೆ ಡಿಕೆಶಿ ಸಣ್ಣ ಗಲಾಟೆ ಎಂದಿದ್ದರು. ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದರು. ಇವೆಲ್ಲವನ್ನೂ ನೋಡಿದರೆ ನಾವೆಲ್ಲರೂಪಾಕಿಸ್ತಾನದಲ್ಲಿದ್ದೀವಾ, ಭಾರತದಲ್ಲಾ ಎಂಬ ಅನುಮಾನ ಮೂಡುತ್ತಿದೆ ಎಂದರು.

ಕಾoಗ್ರೆಸ್‌ನವರು ಮುಸ್ಲಿಂ ಸಮುದಾಯದವನ್ನು ಓಲೈಸುತ್ತಿದ್ದು, ಹಿಂದು ಸಮುದಾಯದವರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನರೇಂದ್ರಮೋದಿ ಅವರನ್ನು ನೋಡಿದರೆ ಕಾಂಗ್ರೆಸ್‌ನವರಿಗೆ ಹೊಟ್ಟೆಯಲ್ಲಿ ಮೆಣಸಿನಕಾಯಿ ಇಟ್ಟುಕೊಂಡoತೆ ಆಗುತ್ತದೆ. ಸ್ವಾತಂತ್ರ‍್ಯ ಬಂದು ೭೫ ವರ್ಷಗಳಾಗಿದ್ದು ಒಬ್ಬ ವ್ಯಕ್ತಿಯ ಹೆಸರಲ್ಲಿ ಇಡೀ ದೇಶದಲ್ಲಿ ಮತ ಕೇಳುತ್ತಿರುವುದು ಇದೇ ಮೊದಲು. ಅದು ಮೋದಿಯವರ ತಾಕತ್ತು. ನರೇಂದ್ರಮೋದಿ ಈ ದೇಶ ಕಾಯುವ ಸೈನಿಕ ಎಂದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಇಂತಹ ಕಾಂಗ್ರೆಸ್ ಪಕ್ಷವನ್ನು ಕಿತ್ತಾಕಬೇಕು. ಪಾಕಿಸ್ತಾನದವರು ನಮ್ಮ ಮೇಲೆ ಬಾಂಬ್ ಹಾಕುತ್ತಿದ್ದರು. ಮೋದಿ ಬಂದ ಮೇಲೆ ಇಲಿಗಳಂತೆ ಬೋನ್‌ನಲ್ಲಿ ಅವಿತಿದ್ದಾರೆ. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳಿದರೆ ಸಿದ್ದರಾಮಯ್ಯ ಬಳಿ ಉತ್ತರವೇ ಇಲ್ಲ. ಡಿ.ಕೆ.ಸುರೇಶ್ ದೇಶ ಇಬ್ಬಾಗ ಆಗಬೇಕು ಅಂತಾರೆ. ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇದೆಯಾ, ಇವರಿಗೆ ದೇಶಭಕ್ತಿ ಇದೆಯಾ ಎಂದು ತೀವ್ರ ಆಕ್ರೋಶ ಹೊರ ಹಾಕಿ ಭಾಷಣ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!