ಹೊಸದಿಗಂತ ವರದಿ,ಮೈಸೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮತೀಯ ಶಕ್ತಿಗಳನ್ನು ಪೋಷಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.
ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತೀಯ ಶಕ್ತಿಗಳ ಅಟ್ಟಹಾಸ ದಿನಢೇ ದಿನೇ ಹೆಚ್ಚಾಗುತ್ತಿದೆ. ಅಮಾಯಕರ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಹಿಂದುಗಳಲ್ಲಿ ಭಯ ಹುಟ್ಟಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಟೂಲ್ ಕಿಟ್ ಗಳು ಕೆಲಸ ಮಾಡುತ್ತಿವೆ. ಹನುಮಾನ್ ಚಾಲೀಸ್ ಹೇಳಿದವರ ಮೇಲೆ ಹಲ್ಲೆ ನಡೆಯುತ್ತಿವೆ. ಜೈ ಶ್ರೀರಾಮ್ ಎಂದರೆ ಹಲ್ಲೆ ಮಾಡುತ್ತಿದ್ದಾರೆ. ಇಂತಹ ಘಟನೆಗಳಿಗೆ ಸರ್ಕಾರ ನೇರ ಹೊಣೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲ ಮತೀಯ ಶಕ್ತಿಗಳನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಬಾಂಬ್ ಸ್ಫೋಟ ಮಾಡಿದವರನ್ನ ನಮ್ಮ ಬ್ರದರ್ಸ್ ಅನ್ನುತ್ತಾರೆ. ನೇಹಾ ಪ್ರಕರಣದಲ್ಲಿ ಜಿಹಾದಿ ಕೊಲೆ ಪ್ರಕರಣ ಅಲ್ಲ ಎಂದು ಸಿಎಂ ಹೇಳುತ್ತಾರೆ. ಹಿಂದುಗಳಲ್ಲಿ ಭಯ ಮೂಡಿಸಬೇಕು, ಭಯದಿಂದ ಬದುಕುವ ನಿರ್ಮಾಣ ಮಾಡುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ವಕ್ತಾರ ಎಂ.ಎ.ಮೋಹನ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.