ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನ್ಯಾಯಾಲಯಗಳಲ್ಲಿ ಇರುವ ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಆದೇಶಿಸಿದ್ದಾರೆ.
ನ್ಯಾಯದೇವತೆ ಯಾರನ್ನೂ ಎಂದಿಗೂ ಬೇಧ ಭಾವ ಮಾಡದಂತೆ ಕಣ್ಣಿಗೆ ಪಟ್ಟಿ ಕಟ್ಟಲಾಗುತ್ತಿತ್ತು. ಇದಕ್ಕೆ ಕಾರಣ ಅಂದರೆ ಬಂದ ಆರೋಪಿಗಳಲ್ಲಿ ಬಡವ ಶ್ರೀಮಂತ ಎಂಬುದು ಕಾಣದಂತೆ ಎಂಬ ಅರ್ಥದಲ್ಲಿ ಇದನ್ನು ನಡೆಸಿಕೊಂಡು ಬರಲಾಗಿತ್ತು.
ಇದೀಗ ಸಿಜೆಐ ಆದೇಶದಂತೆ ಕಣ್ಣಿಗೆ ಕಟ್ಟಲಾದ ಬಟ್ಟೆಯನ್ನು ಸುಪ್ರೀಂ ಕೋರ್ಟ್ನಲ್ಲಿ ತೆರೆಯಲಾಗಿದೆ. ಇಷ್ಟೇ ಅಲ್ಲದೇ ನ್ಯಾಯದೇವತೆಯ ಕೈಯಲ್ಲಿದ್ದ ಖಡ್ಗದ ಬದಲು ಭಾರತದ ಸಂವಿಧಾನ ನೀಡಲು ಸಿಜೆಐ ಸೂಚಿಸಿದ್ದಾರೆ. ಆದೇಶದಂತೆ ಈಗಾಗಲೇ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣ ಮಾಡಲಾಗಿದೆ.
ಭಾರತೀಯ ದಂಡ ಸಂಹಿತೆಯಂತಹ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಭಾರತೀಯ ನ್ಯಾಯ ಸಂಹಿತೆಯಾಗಿ ಬದಲಿಸುವ ಮೂಲಕ ಕಾನೂನು ವ್ಯವಸ್ಥೆಯಲ್ಲಿ ವಸಾಹತುಶಾಹಿ ಪರಂಪರೆಯನ್ನು ಈ ಹಿಂದೆ ಕೈಬಿಡಲಾಗಿತ್ತು.