ಹೊಸದಿಗಂತ ವರದಿ ಮೈಸೂರು:
ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಸಾವಿನ ಹಿಂದೆ ಯಾರ ಕೈವಾಡ ಇದೆ ಎಂಬುದರ ಕುರಿತು ತನಿಖೆಯಾಗಬೇಕು ಎಂದು ಗ್ರಾಮಿಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಬುಧವಾರ ಮೈಸೂರಿನ ಲಲಿತಮಹಲ್ ಹೋಟೆಲ್ನಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತಿಲ್ಲ.ನನ್ನನ್ನು ಭೇಟಿಯಾಗಿರುವುದಾಗಿ ಹೇಳಲು ಯಾರೋ ಹೇಳಿಕೊಟ್ಟಿದ್ದಾರೆ. ಆ ರೀತಿ ಹೇಳಿಕೆ ಕೊಡುವಂತೆ ತಿಳಿಸಿದ್ದಾದರೂ ಯಾರು..? ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ದಿನ ಆತನೊಂದಿಗೆ ಇದ್ದವರು ಯಾರು..? ಘ ಟನೆ ಕುರಿತು ಇನ್ನೂ ಹಲವು ವಿಚಾರಗಳ ಬಗ್ಗೆ ತನಿಖೆಯಾಗಬೇಕು, ಸತ್ಯಾಸತ್ಯತೆ ಹೊರಬರಬೇಕು.
ವಾಟ್ಸಾಪ್ ಸಂದೇಶವನ್ನು ಡೆತ್ ನೋಟ್ ಎಂದು ಪರಿಗಣಿಸಲಾಗದು. ಆ ರೀತಿ ಯಾರು ಬೇಕಾದರೂ ಸೃಷ್ಟಿಸಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೈಯಲ್ಲಿ ಪತ್ರ ಬರೆದು, ಅಂದು ಸಚಿವರಾಗಿದ್ದ ಜಾರ್ಜ್ ಹೆಸರು ಹೇಳಿ ಸಹಿ ಮಾಡಿದ್ದರು. ಅದೇ ರೀತಿ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲೂ ಹಾಗೇ ಆಗಿದೆ ಎಂಬುದು ನನ್ನ ಬಲವಾದ ನಂಬಿಕೆ. ಇದರ ಹಿಂದೆ ಇರುವ ಕಾಣದ ಕೈಗಳ ಬಗ್ಗೆ ಸೂಕ್ತ ತನಿಖೆಯಾಗಬೇಕು.
ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ಮುಚ್ಚಿ ಹಾಕುವುದಿಲ್ಲ.ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಆಗಲೀ, ಗೃಹಸಚಿವರಾಗಲಿ ತಮ್ಮ ರಾಜೀನಾಮೆಯನ್ನು ಕೇಳಿಲ್ಲ, ಒಂದು ವೇಳೆ ರಾಜೀನಾಮೆ ಕೇಳಿದರೆ, ಕೊಡುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ.