ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಬೆಳಂಬಾರದ ಖಾರ್ವಿವಾಡದಲ್ಲಿರುವ ಕೊಳವೆ ಬಾವಿಗೆ ಕಿಡಿಗೇಡಿಗಳು ರೆಟಾಲ್ ಇಲಿ ವಿಷದ ಟ್ಯೂಬ್ ಎಸೆದು ವಿಕೃತಿ ಮೆರೆದಿರುವ ಘಟನೆ ನಡೆದಿದ್ದು ನೀರು ಬರದ ಕಾರಣ ಮನೆಯ ಮಾಲಿಕರು ಪರೀಕ್ಷಿಸಿದ ಸಂದರ್ಭದಲ್ಲಿ ಕೊಳವೆ ಬಾವಿ ಪೈಪಿನಲ್ಲಿ ಇಲಿ ಪಾಷಾಣದ ಟ್ಯೂಬ್ ಬಿದ್ದಿರುವುದು ಕಂಡು ಬಂದಿದೆ.
ಖಾರ್ವಿವಾಡಾದ ನಿರ್ಮಲಾ ಖಾರ್ವಿ ಎನ್ನುವವರಿಗೆ ಸೇರಿದ್ದ ಕೊಳವೆ ಬಾವಿಯಲ್ಲಿ ವಿಷಪೂರಿತ ಇಲಿ ನಾಶಕದ ಟ್ಯೂಬ್ ಪತ್ತೆಯಾಗಿದ್ದು ಮನೆಯ ಪಕ್ಕದಲ್ಲಿ ಇರುವ ಅಂಗನವಾಡಿ ಕೇಂದ್ರಕ್ಕೂ ಸಹ ಇದೇ ಕೊಳವೆ ಬಾವಿಯ ನೀರು ಬಳಕೆಯಾಗುತ್ತಿದ್ದರಿಂದ ಸುಮಾರು 40 ಪುಟ್ಟ ಮಕ್ಕಳು ಅಪಾಯಕ್ಕೆ ಸಿಲುಕುವ ಘಟನೆಗೆ
ಈ ಕೃತ್ಯ ಕಾರಣವಾಗುವ ಸಾಧ್ಯತೆ ಇತ್ತು.
ಅಂಗನವಾಡಿ ಕೇಂದ್ರಕ್ಕೆ ಎರಡು ದಿನಗಳ ಹಿಂದೆಯೇ ನೀರು ತುಂಬಿ ಸಂಗ್ರಹ ಮಾಡಲಾಗಿದ್ದರಿಂದ ಚಿಕ್ಕ ಮಕ್ಕಳು ಅಪಾಯಕ್ಕೆ ಸಿಲುಕುವ ಭೀತಿಯಿಂದ ಪಾರಾಗಿದ್ದಾರೆ.
ದುರುಳರ ಕೃತ್ಯಕ್ಕೆ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಭಯದಿಂದ ಅಂಗನವಾಡಿಗೆ ಮಕ್ಕಳು ಬರಲು ಹಿಂದೇಟು ಹಾಕಿದ್ದಾರೆ.
ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿ ಬಂದಿವೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ಮಡಿವಾಳ, ಉಪಾಧ್ಯಕ್ಷೆ ನಾಗವೇಣಿ ಗೌಡ ಪಿ.ಡಿ.ಓ ಸಿದ್ದಪ್ಪ ತಳವಾರ, ಗ್ರಾಮ ಪಂಚಾಯಿತಿ ಸದಸ್ಯರು
ಸ್ಥಳೀಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಅಂಕೋಲಾ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.