ಹೊಸದಿಗಂತ ವರದಿ,ಮದ್ದೂರು:
ದಾಂಪತ್ಯ ಕಲಹದಿಂದ ವಿಚ್ಛೇದನದ ದಾವೆ ಹೂಡಿದ್ದ ಯುವದಂಪತಿಗಳಿಗೆ ಪಟ್ಟಣದ ಜೆಎಂಎಸ್ಸಿ ನ್ಯಾಯಾಲಯದಲ್ಲಿ ನ. 12ರಂದು ನಡೆದ ಲೋಕಾ ಅದಾಲತ್ನಲ್ಲಿ ನ್ಯಾಯಾಧೀಶರು ನೀಡಿದ ಹಿತವಚನಗಳಿಗೆ ತಲೆಬಾಗಿ ಮತ್ತೆ ಬಾಳಸಂಗಾತಿಗಳಾದ ಪ್ರಸಂಗ ಜರುಗಿತು.
ಮದ್ದೂರು ತಾಲೂಕು ಆತಗೂರು ಹೋಬಳಿಯ ನಿಲುವಾಗಿಲು ಗ್ರಾಮದ ವೆಂಕಟೇಶ್ ಹಾಗೂ ಕಸಬಾ ಹೋಬಳಿ ಗೆಜ್ಜಲಗೆರೆ ಗ್ರಾಮದ ಮಮತಾ ಅವರುಗಳು ಪ್ರೇಮ ವಿವಾಹದ ನಂತರ ಕಳೆದ ಮೂರು ವರ್ಷದಳಿಂದ ದಾಂಪತ್ಯ ಕಲಹದಿಂದ ಬೇರೆ ಬೇರೆಯಾಗಿದ್ದರು.
ಈ ಹಿನ್ನೆಲೆಯಲ್ಲಿ ದಂಪತಿಗಳು ವಿಚ್ಚೇಧನ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸರ್ಪರಾಜ್ ಹುಸೇನ್ ಕಿತ್ತೂರು ಅವರು ಅರ್ಜಿ ವಿಚಾರಣೆಗೆ ಅಂಗೀಕರಿಸಿದರು.
ನಂತರ ಲೋಕಅದಾಲತ್ನಲ್ಲಿ ಜೀವನದ ಮಹತ್ವ ಕುರಿತು ಹಿತವಚನ ನೀಡಿ ಒಂದಾಗಿ ಬಾಳ್ವೆ ನಡೆಸುವಂತೆ ಕಿವಿಮಾತು ಹೇಳಿದರು.
ನ್ಯಾಯಾಧೀಶರ ಮಾತಿಗೆ ತಲೆಬಾಗಿದ ದಂಪತಿಗಳಾದ ವೆಂಕಟೇಶ್ ಮತ್ತು ಮಮತಾ ವಿಚ್ಚೇಧನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದು ಒಂದಾಗಿ ಬಾಳುವುದಾಗಿ ನ್ಯಾಯಾಧೀಶರಿಗೆ ಭರವಸೆ ನೀಡಿದರು. ನಂತರ ನ್ಯಾಯಾಧೀಶರಾದ ಸರ್ಪರಾಜ್ ಹುಸೇನ್ ಹಾಗೂ ನೆರೆದಿದ್ದ ವಕೀಲರ ಸಮ್ಮುಖದಲ್ಲಿ ಪರಸ್ಪರ ಪುಷ್ಪಮಾಲೆ ಬದಲಾಯಿಸಿಕೊಂಡು ಸಿಹಿ ತಿನ್ನಿಸಿ ನ್ಯಾಯಾಲಯದ ಆವರಣದಿಂದ ಕೈ ಕೈ ಹಿಡಿದು ನ್ಯಾಯಾಲಯದ ಆವರಣದಿಂದ ಹೊರನಡೆದರು.
ಅರ್ಜಿದಾರರ ಪರ ಗೆಜ್ಜಲಗೆರೆ ಶಿವಪ್ರಸಾದ್, ಎದುರುದಾರರ ಪರವಾಗಿ ಆತಗೂರು ರಮೇಶ್ ವಾದಿಸಿದ್ದರು.