ಹೊಸದಿಗಂತ ವರದಿ, ಅಂಕೋಲಾ:
ಪಟ್ಟಣದ ಬಂಡಿ ಬಜಾರದಲ್ಲಿ ಕಟ್ಟಡವೊಂದರ ಮೇಲೆ ಕಟ್ಟಲಾಗಿದ್ದ ಬಲೆಯಲ್ಲಿ ಸಿಲುಕಿದ್ದ ಮಂಗನ ಮರಿಯನ್ನು ಕನಸೆಗದ್ದೆಯ ಯುವಕರು ಸುರಕ್ಷಿತವಾಗಿ ಬಲೆಯಿಂದ ಹೊರತೆಗೆದು ತಾಯಿಯ ಮಡಿಲಿಗೆ ಸೇರಿಸಿದ ಘಟನೆ ನಡೆಯಿತು.
ಬಂಡಿಬಜಾರದ ರಸ್ತೆಯ ಒಂದು ಬದಿಯ ಕಟ್ಟಡದಿಂದ ಇನ್ನೊಂದು ಬದಿಯ ಕಟ್ಟಡಕ್ಕೆ ಮಂಗಗಳ ಗುಂಪು ಹಾರಿ ಹೋಗುತ್ತಿದ್ದ ಸಂದರ್ಭದಲ್ಲಿ ಬಹುಮಹಡಿ ಕಟ್ಟಡವೊಂದಕ್ಕೆ ಕಟ್ಟಿದ ಬಲೆಯಲ್ಲಿ ಮಂಗನ ಮರಿ ಸಿಲುಕಿಕೊಂಡಿತ್ತು.
ಮರಿ ಸಿಲುಕಿದ್ದನ್ನು ಕಂಡು ತಾಯಿ ಮಂಗ ಮತ್ತು ಇತರ ಮಂಗಗಳು ಅಲ್ಲಿ ಕುಳಿತು ಮರಿಯ ರಕ್ಷಣೆಗೆ ಪ್ರಯತ್ನ ನಡೆಸುತ್ತಿದ್ದವು.
ಇದನ್ನು ಗಮನಿಸಿದ ಕನಸೆಗದ್ದೆಯ ರಜತ ನಾಯ್ಕ ಮತ್ತು ನೀಲೇಶ ನಾಯ್ಕ ಸಂಗಡಿಗರು ಕಟ್ಟಡದ ಮೇಲೆ ಏರಿ ಬಲೆ ಕತ್ತರಿಸಿ ಮರಿ ಮಂಗವನ್ನು ಬಲೆಯಿಂದ ಬಿಡಿಸುವ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ಸಂದರ್ಭದಲ್ಲಿ ತಾಯಿ ಮಂಗ ಪಕ್ಕದಲ್ಲಿ ಕುಳಿತು ತನ್ನ ಮರಿಯನ್ನು ರಕ್ಷಿಸುತ್ತಿರುವುದನ್ನು ಗಮನಿಸುತ್ತ ಆಗಾಗ ಮರಿಯ ಬಳಿ ಹೋಗಿ ಧೈರ್ಯ ತುಂಬುವ ದೃಶ್ಯಗಳು ಕಂಡು ಬರುತ್ತಿತ್ತು.
ಮರಿಯನ್ನು ರಕ್ಷಣೆ ಮಾಡಿದ ಯುವಕರು ಅದನ್ನು ತಾಯಿ ಬಳಿ ಬಿಟ್ಟೊಡನೆ ತನ್ನ ಮರಿಯನ್ನು ಅಪ್ಪಿದ ತಾಯಿ ಮಂಗ ಧನ್ಯಾತಾ ಭಾವದಿಂದ ಇತರ ಮಂಗಗಳ ಜೊತೆ ಹಾರಿ ಹೋಯಿತು.
ರಕ್ಷಣಾ ಕಾರ್ಯಾಚರಣೆ ನಡೆಸಿದ ಕನಸೆಗದ್ದೆ ಯುವಕರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.