ಹೊಸದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರುಳಿ ಗ್ರಾಮದ ಮನೆಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಬದುಕಿ ಉಳಿದಿದ್ದ ಕೊನೆಯ ಪುತ್ರ ಭರತ್ (28) ಕೂಡಾ ಮಂಗಳವಾರ ಮೃತಪಟ್ಟಿದ್ದಾರೆ.
ಅರಳಸುರುಳಿ ಗ್ರಾಮದ ಅರ್ಚಕ ರಾಘವೇಂದ್ರ ಕೇಕುಡ, ಪತ್ನಿ ನಾಗರತ್ನ ಹಾಗೂ ಹಿರಿಯ ಪುತ್ರ ಶ್ರೀರಾಮ್ ಭಾನುವಾರ ಬೆಳಿಗ್ಗೆ ಮನೆಯಲ್ಲಿ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಕೊನೆಯ ಪುತ್ರ ಭರತ್ ಅವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದರು. ಅವರಿಗೆ ಶೇ.50 ರಷ್ಟು ಸುಟ್ಟ ಗಾಯಗಳಾಗಿತ್ತು.
ತಕ್ಷಣ ಅವರನ್ನು ಶಿವಮೊಗ್ಗ ದ ಮೆಗ್ಗಾನ್ ಆಸ್ಪತ್ರೆ, ನಂತರ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಇನ್ನು ಬೆಂಕಿ ಆಕಸ್ಮಿಕವೋ, ಕುಟುಂಬ ಸಮೇತ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.